'ಜೆಲ್ ಭರೋ ತೆಹ್ರೀಕ್' ಚಳವಳಿಗೆ ಇಮ್ರಾನ್ ಖಾನ್ ಕರೆ
ಪಕ್ಷದ ನಾಯಕರ ಬಂಧನಕ್ಕೆ ಖಂಡನೆ
ಲಾಹೋರ್,ಫೆ.5: ಬಂಧನದಲ್ಲಿರುವ ತನ್ನ ಪಕ್ಷದ ನಾಯಕರ ಮೇಲೆ ದೌರ್ಜನ್ಯ ಹಾಗೂ ಸಾರ್ವತ್ರಿಕ ಚುನಾವಣೆ ಘೋಷಣೆಗೆ ವಿಳಂಬ ವಿರೋಧಿಸಿ 'ಜೈಲ್ ಭರೋ ತೆಹ್ರೀಕ್' ಆಂದೋಲನ ನಡೆಸುವಂತೆ ಪಾಕಿಸ್ತಾನದ ತೆಹ್ರೀಕೆ ಇನ್ಸಾಫ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತನ್ನ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಲಾಹೋರ್ನ ಝಮಾನ್ ಪಾರ್ಕ್ ನಲ್ಲಿರುವ ತನ್ನ ನಿವಾಸದಿಂದ ಟೆಲಿವಿಶನ್ ಮೂಲಕ ಮಾಡಿದ
ತೆಹ್ರೀಕೆ ಇನ್ಸಾಫ್ ಪಕ್ಷದ ಹಿರಿಯ ಉಪಾಧ್ಯಕ್ಷ ಫವಾದ್ ಚೌಧುರಿ ಹಾಗೂ ರಾಷ್ಟ್ರೀಯ ಅಸೆಂಬ್ಲಿಯ ಮಾಜಿ ಸದಸ್ಯ ಶಾನ್ದನಾ ಗುಲ್ಝಾರ್ ವಿರುದ್ಧ ದೇಶದ್ರೋಹದ ಆರೋಪಗಳನ್ನು ದಾಖಲಿಸಿ ಬಂಧಿಸಿದ ಹಿನ್ನೆಲೆಯಲ್ಲಿ ಇಮ್ರಾನ್ ಬೆಂಬಲಿಗರಿಗೆ ಈ ಕರೆಯನ್ನು ಕೊಟ್ಟಿದ್ದಾರೆ. ''ಜೈಲ್ ಭರೋ ತೆಹ್ರೀಕ್ ಚಳವಳಿಗಾಗಿ ನಾನು ನೀಡುವ ಕರೆಗೆ ಸಿದ್ಧವಾಗಿರಿ ಹಾಗೂ ಕಾದುನಿಂತಿರಿ ಎಂದು ಜನತೆಯನ್ನು ನಾನು ಕೇಳಿಕೊಳ್ಳುತ್ತಿದ್ದೇನೆ. ಅವರೆಲ್ಲರನ್ನು ತುಂಬಿಸಿಕೊಳ್ಳಲು ಪಾಕಿಸ್ತಾನದ ಜೈಲುಗಳಲ್ಲಿ ಅಷ್ಟೊಂದು ಜಾಗವಿರಲಾರದು'' ಎಂದು ಇಮ್ರಾನ್ ಖಾನ್ ತನ್ನ ಟಿವಿ ಭಾಷಣದಲ್ಲಿ ಹೇಳಿದರು. ಕಿರುಕುಳ ಹಾಗೂ ಕಸ್ಟಡಿ ಹಿಂಸೆಯಿಂದ ನಾವು ಭಯಭೀತರಾಗಿದ್ದೇವೆಂದು ಒಂದು ವೇಳೆ ಪಾಕಿಸ್ತಾನದ ಮುಸ್ಲಿಂ ಲೀಗ್-ನವಾಝ್ (ಪಿಎಂಎಲ್-ಎನ್) ಹಾಗೂ ಸೇನಾ ಸಂಸ್ಥಾಪನೆಯಲ್ಲಿರುವ ಅವರ ನಿಯಂತ್ರಕರು ಭಾವಿಸಿದ್ದೇ ಆದಲ್ಲಿ, ಖಂಡಿತವಾಗಿಯೂ ಅವರು ತಪ್ಪು ತಿಳಿದಿದ್ದಾರೆಂದು ಅರ್ಥ'' ಎಂದರು.
ಚುನಾವಣಾ ಆಯೋಗದ ಸದಸ್ಯರು ಹಾಗೂ ಅವರ ಕುಟುಂಬಿಕರಿಗೆ ಬೆದರಿಕೆಯೊಡ್ಡಿರುವುದಾಗಿ ಇಮ್ರಾನ್ ಖಾನ್ ಅವರ ನಿಕಟವರ್ತಿ ಫವಾದ್ ಚೌಧುರಿ ವಿರುದ್ಧ ಚುನಾವಣಾ ಆಯೋಗದ ಕಾರ್ಯದರ್ಶಿ ಇಸ್ಲಾಮಾಬಾದ್ ನ ಕೋಹ್ಸರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಈ ಹಿನ್ನೆಲೆಯಲ್ಲಿ ಲಾಹೋರ್ನಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದರು. ಖೈಬರ್ ಪಖ್ತೂಂ ಖ್ವಾ ಪ್ರಾಂತದ ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಶಂದಾನಾ ಗುಲ್ಝಾರ್ ಅವರನ್ನು ದೇಶದ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಹಿಂಸಾಚಾರ ವೆಸಗಲು ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿಸಲಾಗಿತ್ತು.