ನ್ಯಾಯಾಂಗವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಎ.ಎಂ ಅಹ್ಮದಿ ಗಮನಾರ್ಹ ಕೊಡುಗೆ ನೀಡಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
ನಿವೃತ್ತ ಸಿಜೆಐ ಅಹ್ಮದಿ ನಿಧನಕ್ಕೆ ಪ್ರಧಾನಿ ಸಂತಾಪ
ಹೊಸದಿಲ್ಲಿ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಅಝೀಝ್ ಮುಶಬ್ಬರ್ ಅಹ್ಮದಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದುಃಖ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಅಹ್ಮದಿ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅಹ್ಮದಿ ಅವರನ್ನು ದಕ್ಷಿಣ ದಿಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ.
“ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಶ್ರೀ ಎಎಂ ಅಹ್ಮದಿ ಜಿ ಅವರ ನಿಧನದಿಂದ ನೋವಾಗಿದೆ. ಅವರು ವಕೀಲರಾಗಿ ಮತ್ತು ನ್ಯಾಯಾಧೀಶರಾಗಿ ವಿಶಿಷ್ಟ ವೃತ್ತಿಜೀವನವನ್ನು ಹೊಂದಿದ್ದರು. ನಮ್ಮ ನ್ಯಾಯಾಂಗವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ಕುಟುಂಬಕ್ಕೆ ಸಂತಾಪಗಳು. ಅವರ ಆತ್ಮಕೆ ಶಾಂತಿ ಸಿಗಲಿ.’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
1932 ಮಾರ್ಚ್ 25ರಂದು ಸೂರತ್ನಲ್ಲಿ ಜನಿಸಿದ ಎ.ಎಂ.ಅಹ್ಮದಿ ಅವರು, 1964ರಲ್ಲಿ ಅಹಮದಾಬಾದ್ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ನಂತರ 1976ರಲ್ಲಿ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಉನ್ನತಿಗೇರಿದ್ದರು.
1988ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಅವರು 1994ರ ಅಕ್ಟೋಬರ್ 25ರಂದು ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು.
1997ರ ಮಾರ್ಚ್ 24ರಂದು ನಿವೃತ್ತರಾಗಿದ ಅವರು ಸುಪ್ರೀಂಕೋರ್ಟ್ ಕಾನೂನು ನೆರವು ಸಮಿತಿ ಅಧ್ಯಕ್ಷರಾಗಿ ಹಾಗೂ ಎರಡು ಅವಧಿಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
Pained by the passing away of former Chief Justice of India, Shri AM Ahmadi Ji. He had a distinguished career as a lawyer and a Judge. He made a noteworthy contribution towards making our judiciary more effective. Condolences to his family. May his soul rest in peace.
— Narendra Modi (@narendramodi) March 3, 2023