ಚುನಾವಣೆ ನಡೆಸಲು ಹಣವಿಲ್ಲ: ಪಾಕ್ ಸಚಿವ ಆಸಿಫ್
ಇಸ್ಲಮಾಬಾದ್, ಮಾ.25: ಚುನಾವಣೆ ನಡೆಸಲು ಹಣಕಾಸು ಇಲಾಖೆಗೆ ಹಣದ ಕೊರತೆ ಎದುರಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ರನ್ನು ಉಲ್ಲೇಖಿಸಿ ಎಆರ್ಐ ನ್ಯೂಸ್ ವರದಿ ಮಾಡಿದೆ.
ಅಂತರಾಷ್ಟ್ರೀಯ ಮಾಧ್ಯಮದವರನ್ನು ಉದ್ದೇಶಿಸಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಆಸಿಫ್, ಹಣಕಾಸಿನ ಕೊರತೆಯಿಂದಾಗಿ ದೇಶದಲ್ಲಿ ಈಗ ಚುನಾವಣೆ ನಡೆಸುವ ಪರಿಸ್ಥಿತಿ ಇಲ್ಲ ಎಂದು ಹೇಳಿದರು. ಮಾಹಿತಿ ಸಚಿವೆ ಮರಿಯಮ್ ಔರಂಗಜೇಬ್ ಅವರೂ ಸುದ್ದಿಗೋಷ್ಟಿಯಲ್ಲಿದ್ದರು.
ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ಖಾನ್ ಹತ್ಯೆ ಯತ್ನ ಎಂಬುದು ಬರೀ ಸುಳ್ಳಿನ ಕಂತೆ. ಸದಾ ಯಾರಾದರೊಬ್ಬರ ಮೇಲೆ ಆರೋಪ ಹೊರಿಸುವುದು ಇಮ್ರಾನ್ರ ಜಾಯಮಾನವಾಗಿದೆ ಎಂದು ಆಸಿಫ್ ಆರೋಪಿಸಿದರು. ತನ್ನ ಪಕ್ಷದ ಆಡಳಿತವಿರುವ ಪ್ರಾಂತೀಯ ವಿಧಾನಸಭೆಗಳನ್ನು ಅಸಾಂವಿಧಾನಿಕ ರೀತಿಯಲ್ಲಿ ಇಮ್ರಾನ್ ವಿಸರ್ಜಿಸಿದ್ದರು. ಆದರೆ ಅವರನ್ನು ಸಾಂವಿಧಾನಿಕ ರೀತಿಯಲ್ಲಿ ಪದಚ್ಯುತಗೊಳಿಸಲಾಗಿದೆ. ಈಗ ನ್ಯಾಯಾಲಯದಲ್ಲಿ ಹಾಜರಾಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆಸಿಫ್ ಟೀಕಿಸಿದರು.