ಮೌನ ಮುರಿದ ಫವಾದ್ ಖಾನ್
ನಿಲುವು ಬಹಿರಂಗಪಡಿಸಿದ ಪಾಕ್ ನಟ
ಲಾಹೋರ್, ಅ. 7: ಇತ್ತೀಚಿನ ಉರಿ ದಾಳಿಯ ಬಳಿಕ ಭಾರೀ ರಾಜಕೀಯ ಟೀಕೆಗಳಿಗೆ ಗುರಿಯಾಗಿದ್ದ ಪಾಕಿಸ್ತಾನಿ ನಟ ಫಾವದ್ ಖಾನ್ ಕೊನೆಗೂ ವೌನ ಮುರಿದಿದ್ದಾರೆ.
‘‘ನಾವು ಜೊತೆಯಾಗಿದ್ದರೆ ಹೆಚ್ಚು ಶಾಂತಿಯುತ ಜಗತ್ತನ್ನು ನಿರ್ಮಿಸಬಹುದು ಹಾಗೂ ಶಾಂತಿಯುತ ಜಗತ್ತಿನಲ್ಲಿ ಬದುಕಬಹುದು ಎಂದು ಎರಡು ಪುಟ್ಟ ಮಕ್ಕಳ ತಂದೆಯಾಗಿ ಹೆಚ್ಚಿನ ಎಲ್ಲರಂತೆ ನಾನೂ ಪ್ರಾರ್ಥಿಸುತ್ತೇನೆ ಹಾಗೂ ಆಶಿಸುತ್ತೇನೆ. ನಮ್ಮ ನಾಳೆಗಳನ್ನು ರೂಪಿಸುವ ಮಕ್ಕಳಿಗಾಗಿ ನಾವು ಇದನ್ನು ಕೊಡಬೇಕಾಗಿದೆ’’ ಎಂದು ಅವರು ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ.
‘‘ಜುಲೈಯಿಂದ ನಾನು ಲಾಹೋರ್ನಲ್ಲಿದ್ದೇನೆ. ನಾನು ಮತ್ತು ನನ್ನ ಹೆಂಡತಿ ಎರಡನೆ ಮಗುವಿನ ನಿರೀಕ್ಷೆಯಲ್ಲಿದ್ದೇವೆ’’ ಎಂದಿದ್ದಾರೆ.
ಉರಿ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಹದಗೆಡುತ್ತಿದ್ದಂತೆಯೇ, ಫವಾದ್ ಖಾನ್ ಭಾರತದಿಂದ ಸದ್ದಿಲ್ಲದೆ ಸ್ವದೇಶಕ್ಕೆ ವಾಪಸಾಗಿದ್ದರು. ಪಾಕಿಸ್ತಾನಿ ಕಲಾವಿದರು ಭಾರತವನ್ನು ತೊರೆಯಬೇಕು ಎಂಬುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ರಾಜ್ ಠಾಕ್ರೆ ಬೆದರಿಕೆ ಹಾಕಿದ್ದರು.
ವಾಪಸಾತಿಯ ಬಳಿಕ, ಅವರು ಭಾರತ ಮತ್ತು ಬಾಲಿವುಡ್ ವಿರೋಧಿ ಹೇಳಿಕೆ ನೀಡಿದ್ದಾರೆಂದು ವರದಿಯಾಗಿತ್ತು.
‘‘ಈ ವಿಷಯದ ಬಗ್ಗೆ ನಾನು ಮಾತನಾಡುತ್ತಿರುವುದು ಇದೇ ಮೊದಲು. ಈ ಅವಧಿಯಲ್ಲಿ ನಾನು ಹೇಳಿದ್ದು ಎನ್ನಲಾದ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳಬೇಡಿ. ಯಾಕೆಂದರೆ, ನಾನು ಅವುಗಳನ್ನು ಹೇಳಿಲ್ಲ. ಪಾಕಿಸ್ತಾನ, ಭಾರತ ಮತ್ತು ಜಗತ್ತಿನೆಲ್ಲೆಡೆ ಇರುವ ನನ್ನ ಅಭಿಮಾನಿಗಳು ಮತ್ತು ಸಹ ಕಲಾವಿದರಿಗೆ ಅವರು ನನಗೆ ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ’’ ಎಂದು ಫವಾದ್ ಹೇಳಿದ್ದಾರೆ.