ಸುಡಾನ್ನಲ್ಲಿ ಸಂಘರ್ಷ: ಸಾವಿರಾರು ಮಕ್ಕಳು ನಿರಾಶ್ರಿತ
ಖಾರ್ಟೂಮ್ (ಸುಡಾನ್), ಫೆ. 19: ಸುಡಾನ್ನ ಸಂಘರ್ಷಪೀಡಿತ ದಾರ್ಫುರ್ ವಲಯದ ಜೆಬೆಲ್ ಮರ್ರ ಪರ್ವತ ಪ್ರದೇಶಗಳಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ತಪ್ಪಿಸಿಕೊಂಡು ಸಾವಿರಾರು ಮಕ್ಕಳು ಪಲಾಯನಗೈಯುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯೂನಿಸೆಫ್ ಗುರುವಾರ ಹೇಳಿದೆ.
ಜೆಬೆಲ್ ಮರ್ರ ಪರ್ವತ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಬುಡಕಟ್ಟು ಬಂಡುಕೋರರು ಮತ್ತು ಸೈನಿಕರ ನಡುವೆ ನಡೆಯುತ್ತಿರುವ ಭೀಕರ ಕಾಳಗದಿಂದಾಗಿ 82,727 ನಾಗರಿಕರು ನಿರಾಶ್ರಿತರಾಗಿದ್ದಾರೆ. ಅವರ ಪೈಕಿ 60 ಶೇಕಡ ಮಕ್ಕಳು ಎಂದು ಯೂನಿಸೆಫ್ನ ಸುಡಾನ್ ಮುಖ್ಯಸ್ಥ ಗೀರ್ತ್ ಕ್ಯಾಪಲೇರ್ ತಿಳಿಸಿದರು.
ಇಲ್ಲಿ ಜನವರಿ 15ರಿಂದ ಸಂಘರ್ಷ ಆರಂಭವಾಗಿದೆ.
‘‘ಇಲ್ಲಿನ ಮಕ್ಕಳಿಗೆ ಈಗಾಗಲೇ ಯಾವುದೇ ಸೌಕರ್ಯವಿಲ್ಲ. ಈಗ ಈ ಕೊನೆಯೇ ಇಲ್ಲ ಕಾಳಗವನ್ನು ನೋಡಿ ಮಕ್ಕಳು ಹತಾಶರಾಗಿದ್ದಾರೆ’’ ಎಂದರು.
ದಾರ್ಫುರ್ ವಲಯದ ಕೇಂದ್ರ ಭಾಗದಲ್ಲಿ ಜೆಬೆಲ್ ಮರ್ರ ಇದೆ. ಇದು ಅಬ್ದುಲ್ವಾಹಿದ್ ನೂರ್ ನೇತೃತ್ವದ ಸುಡಾನ್ ಲಿಬರೇಶನ್ ಆರ್ಮಿ ಬಂಡುಕೋರರ ಭದ್ರನೆಲೆಯಾಗಿದೆ.
Next Story