ರಾಜಶೇಖರ ಕೋಟಿ ನಿಧನಕ್ಕೆ ಗಣ್ಯರ ಸಂತಾಪ
ಬೆಂಗಳೂರು, ನ.23: ನಾಡಿನ ಹಿರಿಯ ಪತ್ರಕರ್ತ, ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ ಕೋಟಿ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತ ವೃತ್ತಿಯನ್ನು ಉಸಿರಾಗಿಸಿಕೊಂಡಿದ್ದ ರಾಜಶೇಖರ ಕೋಟಿ ಅಪರೂಪದ ಪತ್ರಕರ್ತರು. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಅನುಗುಣವಾಗಿ ಆಂದೋಲನ ಪತ್ರಿಕೆಯನ್ನು ರೂಪಿಸಿದ್ದರು. ಅದರಲ್ಲಿ ಬರುವ ಪ್ರತಿಯೊಂದು ಲೇಖನವು ಸಮಾಜಮುಖಿ ಚಿಂತನೆಯನ್ನೊಳಗೊಂಡಿತ್ತು. ಹೀಗಾಗಿ ಅವರ ನಿಧನ ಸಮಾಜಕ್ಕೆ ಹಾಗೂ ವಿಶೇಷ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವೆಂದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಭಿಪ್ರಾಯಿಸಿದ್ದಾರೆ.
ಪತ್ರಿಕಾ ವೃತ್ತಿಯ ಉನ್ನತ ಆದರ್ಶಗಳನ್ನು ಪಾಲಿಸಿಕೊಂಡು ಬಂದ ರಾಜಶೇಖರ ಕೋಟಿ ಸಮಾಜಕ್ಕೆ ಆದರ್ಶಪ್ರಾಯವಾಗಿದ್ದರು. ಯುವ ಪತ್ರಕರ್ತರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಆಂದೋಲನ ಪತ್ರಿಕೆಯನ್ನು ಪ್ರತಿಯೊಬ್ಬರು ಆತ್ಮೀಯವಾಗಿ ಓದುವಂತೆ ರೂಪಿಸಿದ್ದರು. ಅಂತವರು ನಮ್ಮ ಮುಂದೆ ದಿಢೀರನೆ ಇಲ್ಲವಾಗಿರುವುದು ನೋವು ತರಿಸಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮರುಗಿದ್ದಾರೆ.