ಕ್ರೈಸ್ತ ದಲಿತರ ಸಾಂಸ್ಕೃತಿಕ ಬದುಕು 10 ಸಂಪುಟಗಳಲ್ಲಿ ದಾಖಲು
ಬೆಂಗಳೂರು, ಡಿ.5: ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುವ ದಲಿತ ಸಮುದಾಯದ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಆಯಾಮಗಳನ್ನು 10 ಸಂಪುಟಗಳಲ್ಲಿ ದಾಖಲಿಸುವಂತಹ ಮಹತ್ವವಾದ ‘ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧ’ ಎಂಬ ಯೋಜನೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದೆ.
ವಿಶೇಷ ಘಟಕ-ಗಿರಿಜನ ಉಪಯೋಜನೆಯ ಅನುದಾನದಡಿಯಲ್ಲಿ ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧ ಯೋಜನೆಯ ರೂಪರೇಷೆಗಳನ್ನು ರೂಪಿಸಲಾಗಿದೆ. ಕ್ರೈಸ್ತ ಮತಕ್ಕೆ ಮತಾಂತರವಾದ ದಲಿತ ಕುಟುಂಬದ ಕೌಟುಂಬಿಕ ಹಾಗೂ ಸಾಮಾಜಿಕ ಹೊಯ್ದೆಟ ಮತ್ತು ಸಂಘರ್ಷದ ಸ್ವರೂಪವನ್ನು ದಾಖಲಿಸಲಾಗುತ್ತಿದೆ.
ದಲಿತ ಕ್ರೈಸ್ತರ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸ್ಥಾನಮಾನಗಳಲ್ಲಾದ ಬದಲಾವಣೆ ಹಾಗೂ ಪರಿವರ್ತನೆಯ ಕುರಿತ ವಿಶ್ಲೇಷಿಸಲಾಗುತ್ತದೆ. ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರ ನಂತರದ ಸಾಂಸ್ಕೃತಿಕ ಬೇರುಗಳು, ಮತಾಂತರಕ್ಕೂ ಮುನ್ನವಿದ್ದ ಸಂಸ್ಕೃತಿ ಕತೆಗಳೊಂದಿಗಿರುವ ನಂಬಿಕೆ, ಸಂಪ್ರದಾಯ ಹಾಗೂ ಆಚರಣೆಯನ್ನು ಗುರುತಿಸಲು ಈ ಅಧ್ಯಯನದಿಂದ ಸಾಧ್ಯವಾಗಲಿದೆ.
ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧದ ಯೋಜನೆಯು ವರ್ತಮಾನಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆಯಾದರೂ ರಾಜ್ಯಕ್ಕೆ ಕ್ರೈಸ್ತ ಮಿಷನರಿಗಳ ಪ್ರವೇಶ, ಮಿಷನರಿಗಳು ದಲಿತರ ಕುರಿತು ಮಾಡಿದ ಸೇವಾ ಮತ್ತು ಸಾಹಿತ್ಯದ ಕಾರ್ಯಗಳನ್ನು ಪ್ರತ್ಯೇಕವಾಗಿಯೇ ಜಿಲ್ಲಾವಾರು ಗುರುತಿಸುವ ಚಿಂತನೆಯನ್ನು ಅಕಾಡೆಮಿ ಹೊಂದಿದ್ದು, ಒಂದು ಜಿಲ್ಲೆಯ ಸಂಕ್ಷಿಪ್ತ ಚರಿತ್ರೆಯನ್ನೊಳಗೊಂಡಂತೆ ಮೇಲಿನ ಎಲ್ಲ ಸಂಗತಿಗಳನ್ನು ಅಧ್ಯಯನ ಮಾಡಲಾಗುತ್ತಿದೆ.
ಯೋಜನೆಯ ಸ್ವರೂಪ: ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧದ ಯೋಜನೆಯು ರಾಜ್ಯದ ಎಲ್ಲ ತಾಲೂಕುಗಳನ್ನು ಒಳಗೊಂಡಿದ್ದು, ಅಧ್ಯಯನಕ್ಕೆ ಅನುಕೂಲವಾಗುವಂತೆ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ನಾಲ್ಕು ಕಂದಾಯ ವಿಭಾಗಗಳನ್ನಾಗಿ ವರ್ಗೀಕರಿಸಲಾಗಿದೆ. ಹಾಗೂ ಯೋಜನೆಯ ಮಾರ್ಗದರ್ಶನ ಹಾಗೂ ಸಲಹೆ-ಸೂಚನೆ ನೀಡಲು ವಿದ್ವಾಂಸರಾದ ಪ್ರೊ.ಜಾಫೆಟ್, ಡಾ.ಪಿ.ಕೆ.ಖಂಡೋಬಾ, ಡಾ.ಎಲ್.ಹನುಮಂತಯ್ಯ ಹಾಗೂ ಡಾ.ಮೂಡ್ನಾಕೂಡು ಚಿನ್ನಸ್ವಾಮಿಯನ್ನು ನೇಮಿಸಲಾಗಿದೆ.
ಬೆಂಗಳೂರು ವಿಭಾಗ: ಬೆಂಗಳೂರು ವಿಭಾಗಕ್ಕೆ ಡಾ.ಡಿ.ಡೊಮಿನಿಕ್ ವಿಭಾಗೀಯ ಸಂಪಾದಕರಾಗಿದ್ದಾರೆ. ಇದರಲ್ಲಿ ರೆವಡೆಂಡ್ ಮನೋಹರ ಚಂದ್ರಪ್ರಸಾದ್(ಬೆಂಗಳೂರು ನಗರ), ಡಾ.ರೀಟಾರಿನಿ(ಬೆಂ.ಗ್ರಾಮಾಂತರ), ಡಾ.ರವಿಕುಮಾರ್ ನೀಹ(ತುಮಕೂರು), ಕುಪ್ಪಳ್ಳಿ ಭೈರಪ್ಪ(ಕೋಲಾರ), ಡಾ.ರಾಜಣ್ಣ(ಚಿಕ್ಕಬಳ್ಳಾಪುರ), ಡಾ.ಗುರುಪ್ರಸಾದ್ ಕಂಟಲಗೆರೆ(ಚಿತ್ರದುರ್ಗ), ಡಿ.ಸಿ.ಪ್ರಕಾಶ(ರಾಮನಗರ), ವಿಲಿಯಂ(ಶಿವಮೊಗ್ಗ), ಡಾ.ಫ್ರಾನ್ಸಿಸ್(ದಾವಣಗೆರೆ) ಕಾರ್ಯನಿರ್ವಹಿಸಲಿದ್ದಾರೆ.
ಮೈಸೂರು ವಿಭಾಗ:ಈ ವಿಭಾಗಕ್ಕೆ ಡಾ.ಮೈಲಹಳ್ಳಿ ರೇವಣ್ಣ ವಿಭಾಗೀಯ ಸಂಪಾಕರಾಗಿದ್ದಾರೆ. ಇದರಲ್ಲಿ ಡಾ.ಕೆ.ಸೌಭಾಗ್ಯವತಿ(ಮೈಸೂರು), ಡಾ.ಪಿ.ಮಣಿ(ಚಾಮರಾಜನಗರ), ಡಾ.ಪುರುಷೋತ್ತಮ್ಕುಮಾರ್(ಹಾಸನ), ಡಾ.ಸಿ.ಹೊಂಬಯ್ಯ(ಮಂಡ್ಯ), ಪ್ರೊ.ಎ.ಟಿ.ಸದೆಬೋಸ್(ಕೊಡಗು), ಡಾ.ಬಿ.ಉದಯ್ ಬಾರ್ಕೂರು(ದಕ್ಷಿಣ ಕನ್ನಡ), ಡಾ.ಸುಮ(ಉಡುಪಿ) ಹಾಗೂ ಗಿರೀಶ್ ಮೂಗ್ತಿಹಳ್ಳಿ(ಚಿಕ್ಕಮಗಳೂರು)ಕಾರ್ಯನಿರ್ವಹಿಸಲಿದ್ದಾರೆ.
ಕಲಬುರಗಿ ವಿಭಾಗ: ಈ ವಿಭಾಗಕ್ಕೆ ಡಾ.ಎಚ್.ಟಿ.ಪೋತೆ ಸಂಪಾಧಕರಾಗಿದ್ದಾರೆ. ಡಾ.ಜಯದೇವಿ ಗಾಯಕ್ವಾಡ್(ಬೀದರ್ ಜಿಲ್ಲೆ), ಡಾ.ಚಿನ್ನಸ್ವಾಮಿ ಸೋಸಲೆ(ಬಳ್ಳಾರಿ ಜಿಲ್ಲೆ), ಶೈಲ ನಾಗರಾಳ(ಕಲಬುರಗಿ), ಡಾ.ಗವಿಸಿದ್ದಪ್ಪ ಎಚ್.ಪಾಟೀಲ(ಬೀದರ್ಜಿಲ್ಲೆ), ಡಾ.ಎಂ.ಬಿ.ಕಟ್ಟಿ(ಕಲಬುರಗಿ) ಹಾಗೂ ಪುಷ್ಪಾವತಿ ಸಾಲೋಮನ್ ಕುಮಾರ್(ರಾಯಚೂರು) ಕಾರ್ಯನಿರ್ವಹಿಸಲಿದ್ದಾರೆ.
ಬೆಳಗಾವಿ ವಿಭಾಗ: ಇದಕ್ಕೆ ಡಾ.ಚಂದ್ರಕಿರಣ ಎಸ್.ಕುಳವಾಡಿ ಸಂಪಾದಕರಾಗಿದ್ದಾರೆ. ಪ್ರೊ.ಕೆ.ಎನ್.ದೊಡ್ಡಮನಿ(ಬೆಳಗಾವಿ), ದೇವರೆಡ್ಡಿ(ಧಾರವಾಡ), ಡಾ.ಎಚ್.ಬಿ.ಪೂಜಾರ್(ಗದಗ), ರಾಜೀವ ಮಾಳಗಿ ಮನೆ(ಉತ್ತರ ಕನ್ನಡ), ಡಾ.ಸಣ್ಣವೀರಣ್ಣ ದೊಡ್ಡಮನಿ(ಬಾಗಲಕೋಟೆ), ಶ್ರೀನಿವಾಸ ದೊಡ್ಡಮನಿ(ಹಾವೇರಿ) ಹಾಗೂ ಡಾ.ಅಮರೇಶ್ ಯತಗಲ್(ವಿಜಯಪುರ) ಕಾರ್ಯನಿರ್ವಹಿಸಲಿದ್ದಾರೆ.