ಅನಂತ್ ಕುಮಾರ್ ಹೆಗಡೆ ಬಚ್ಚಲು ವಾಸನೆ ಇದ್ದಂತೆ: ಕೆ.ಎಲ್.ಅಶೋಕ್
ಬೆಂಗಳೂರು, ಜ.17: ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಬಚ್ಚಲು ವಾಸನೆ ಇದ್ದಂತೆ, ಅವರಿಗೆ ಕುವೆಂಪು, ಅಂಬೇಡ್ಕರ್, ಬಸವಣ್ಣ, ಜಾತ್ಯತೀತವಾದ ಯಾವುದೂ ಬೇಡ. ಮನುವಾದದ ನಂಜನ್ನು ಅವರಿಗೆ ಇಂಜೆಕ್ಟ್ ಮಾಡಲಾಗಿದೆ ಎಂದು ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ರನ್ನು ಪ್ರಗತಿಪರ ಮುಖಂಡರೊಂದಿಗೆ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿರುವ ಅನಂತ್ ಕುಮಾರ್ ಹೆಗಡೆಗೆ ಈ ದೇಶ ಯಾಕೆ ಬೇಕು ಎಂದು ಪ್ರಶ್ನಿಸಿದರು.
ಅನಂತ್ಕುಮಾರ್ ಹೆಗಡೆ ಇಲ್ಲಿರಲು ನಾಲಾಯಕ್, ಮೊದಲು ಅವರನ್ನು ರಾಜ್ಯದಿಂದ ಒದ್ದು ಓಡಿಸಬೇಕು. ರಾಜ್ಯದಲ್ಲಿ ಬಹುಸಂಖ್ಯಾತರು ಶೂದ್ರರು. ಇವರು ನಟ ಪ್ರಕಾಶ್ ರೈ ಹೋದ ಜಾಗವನ್ನು ಶುದ್ಧ ಮಾಡುತ್ತಾರೆಂದರೆ ಏನರ್ಥ. ಅಸ್ಪೃಶ್ಯ ಆಚರಣೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ ಎಂದು ಅವರು ದೂರಿದರು.
ರಾಷ್ಟ್ರಕವಿ ಕುವೆಂಪು ಸಮಾಜಕ್ಕೆ ವಿಶ್ವ ಮಾನವತೆಯ ಸಂದೇಶ ನೀಡಿದರೆ, ಇವರು ದೇವರಾಗೋಣ ಅಂತಿದ್ದಾರೆ. ಇವರಿಗೆ ಮನುಷ್ಯರಾಗೋದು ಬೇಡ. ಆದುದರಿಂದಲೆ, ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂದು ಅಶೋಕ್ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಅನೀಸ್, ದಸಂಸ ಮುಖಂಡ ವೆಂಕಟಪ್ಪ, ಸೌತ್ ಇಂಡಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಬಾಸ್ಟಿಯನ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.