ಅಂಗಾಂಗ ದಾನ ಕುರಿತು ಅರಿವು ಅಗತ್ಯ: ನಿವೃತ್ತ ನ್ಯಾ.ಶಿವರಾಜ್ ಪಾಟೀಲ್
ಬೆಂಗಳೂರು, ಜೂ.1: ಜನರ ಜೀವ ಉಳಿಸಲು ರಕ್ತದಾನ ಮತ್ತು ಅಂಗಾಂಗ ದಾನ ಬಹಳ ಮಹತ್ವದಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ನಿವೃತ್ತ ನ್ಯಾ.ಶಿವರಾಜ್ ಪಾಟೀಲ್ ಅಭಿಪ್ರಾಯಿಸಿದರು.
ಶುಕ್ರವಾರ ಯಶವಂತಪುರದಲ್ಲಿರುವ ಸ್ಪರ್ಶ್ ಆಸ್ಪತ್ರೆಯ ರಕ್ತದ ಬ್ಯಾಂಕ್ ಮತ್ತು ಅಂಗಾಂಗ ದಾನ ಹಾಗೂ ಕಸಿ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ವಿಶೇಷವಾಗಿ ಅಂಗಾಂಗ ದಾನದ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯಿದೆ. ವ್ಯಕ್ತಿಯೊಬ್ಬರು ಸತ್ತಾಗ ಅವರ ಕಣ್ಣು ಸೇರಿದಂತೆ ಇತರೆ ಅಂಗಾಂಗಗಳನ್ನು ಸುಡುವುದಕ್ಕಿಂತ ದಾನ ಮಾಡುವುದರಿಂದ ಹತ್ತಾರು ಜೀವಗಳಿಗೆ ಹೊಸ ಚೈತನ್ಯ ನೀಡಬಹುದು ಎಂದು ತಿಳಿಸಿದರು.
ಅಂಗದಾನ ಆದ ಕೂಡಲೆ ಅದನ್ನು ಸಾಗಿಸುವ ಮತ್ತು ಇನ್ನೊಬ್ಬ ವ್ಯಕ್ತಿಗೆ ಕಸಿ ಮಾಡುವಾಗ ಆಗುವಂತ ವಿಳಂಬವನ್ನು ತಡೆಗಟ್ಟಲು ಈಗಿನ ಕಾನೂನಿನಲ್ಲಿ ಕೆಲವು ತೊಡಕುಗಳಿವೆ. ಇದನ್ನು ನಿವಾರಿಸುವ ಕೆಲಸ ಆಗಬೇಕಾಗಿದೆ. ಅಂಗಾಂಗಗಳನ್ನು ಒಂದು ಕಡೆಯಿಂದ ಮತ್ತೊಂಡು ಕಡೆಗೆ ಸಾಗಿಸುವಾಗ ವೈದ್ಯರು, ಸಾರಿಗೆ ಇಲಾಖೆ, ಪೊಲೀಸ್ ಹಾಗೂ ಸಾರ್ವಜನಿಕರ ಸಹಕಾರ ತೀರ ಅಗತ್ಯವಿದೆ ಎಂದು ಅವರು ಆಶಿಸಿದರು.
ಆಸ್ಪತ್ರೆಯ ಅಧ್ಯಕ್ಷ ಡಾ.ಶರಣ್ ಪಾಟೀಲ್ ಮಾತನಾಡಿ, ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ ಕನಿಷ್ಟ ಏಳು ಜನರಿಗೆ ಜೀವ ಉಳಿಸಬಹುದಾಗಿದೆ ಎಂದು ತಿಳಿಸಿದರು.