ಆಪ್ತನ ನೆನೆದು ಬಿಕ್ಕಿ ಬಿಕ್ಕಿ ಅತ್ತ ನಟ ಮೋಹನ್ ಬಾಬು
ಅಂಬರೀಶ್ ಅಂತ್ಯ ಸಂಸ್ಕಾರ
ಬೆಂಗಳೂರು, ನ. 26: ನಟ ಅಂಬರೀಶ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರ ಆಪ್ತ, ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು, ಅಂಬಿ ಚಿತೆಗೆ ಗಂಧದ ಕಟ್ಟಿಗೆ ಜೋಡಿಸುವ ವೇಳೆ ಪಾರ್ಥಿವ ಶರೀರವನ್ನು ಕಂಡು ಬಿಕ್ಕಿ-ಬಿಕ್ಕಿ ಅತ್ತರು.
ಸೋಮವಾರ ಇಲ್ಲಿನ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಅಂಬರೀಶ್ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿತ್ತು. ಈ ವೇಳೆ ಅಲ್ಲಿಗೆ ಮೋಹನ್ ಬಾಬು ತಮ್ಮ ಪುತ್ರ ಮತ್ತು ಪುತ್ರಿಯೊಂದಿಗೆ ಆಗಮಿಸಿದ್ದರು.
ಅಂಬರೀಶ್ ಅವರಿಗೆ ಸಿದ್ಧಪಡಿಸುತ್ತಿದ್ದ ಚಿತೆಯ ಬಳಿ ತೆರಳಿದ ಮೋಹನ್ ಬಾಬು, ಕೈಯಲ್ಲಿ ಕಟ್ಟಿಗೆ ಹಿಡಿದ ತಕ್ಷಣವೇ ಭಾವುಕರಾಗಿ ಗೆಳೆಯನ ನೆನೆದು ಬಿಕ್ಕಿ ಬಿಕ್ಕಿ ಅತ್ತರು. ಬಳಿಕ ಕುಟುಂಬದವರೊಟ್ಟಿಗೆ ಸೇರಿ ಚಿತೆಗೆ ಕಟ್ಟಿಗೆಯನ್ನು ಹಾಕಿ, ಕೈಮುಗಿದು ಕಣ್ಣೀರಿಟ್ಟರು.
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದ ಗೆಳೆಯನ ಅಗಲಿಕೆ ಸುದ್ದಿ ತಿಳಿದು ಬೆಂಗಳೂರಿಗೆ ಧಾವಿಸಿದ ಮೋಹನ್ ಬಾಬು, ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು.