'ಆಪರೇಷನ್ ಕಮಲ' ಬಗ್ಗೆ ನಮಗೆ ಆತಂಕವಿಲ್ಲ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಜ.14: ಬಿಜೆಪಿಯ 'ಆಪರೇಷನ್ ಕಮಲ'ದ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ. ನಮ್ಮ ಶಾಸಕರುಗಳ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಯಾರು ಕೂಡಾ ಬಿಜೆಪಿ ಸೇರುವುದಿಲ್ಲ. ಸಮ್ಮಿಶ್ರ ಸರಕಾರ ಸ್ಥಿರವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಬಿಜೆಪಿ ಮುಖಂಡರು ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಯಶ ಕಾಣುವುದಿಲ್ಲ. ದೇವಸ್ಥಾನ ಭೇಟಿಗೋ ಅಥವಾ ಇತರ ಕಾರಣಕ್ಕೆ ನಮ್ಮ ಶಾಸಕರು ಮುಂಬೈಗೆ ತೆರಳಿರಬಹುದು. ಯಾವ ಕಾರಣಕ್ಕೆ ಎಂಬುದು ನಮಗೆ ಗೊತ್ತಿಲ್ಲ. ಅದನ್ನು ಬೇರೆ ರೀತಿಯಲ್ಲಿ ವಿಶ್ಲೇಷಿಸುವುದು ಬೇಡ ಎಂದರು.
ಕಾಂಗ್ರೆಸ್ನ ಯಾವ ಶಾಸಕರು ಬಿಜೆಪಿ ಸೇರುತ್ತೇವೆ ಎಂದು ಹೇಳಿಕೆ ನೀಡಿಲ್ಲ. ಅನಗತ್ಯವಾಗಿ ತಪ್ಪಾರ್ಥ ಮಾಡಿಕೊಳ್ಳುವುದು ಬೇಡ. ನಮ್ಮಶಾಸಕರ ಮೇಲೆ ನಮಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.
Next Story