ಸಂವಿಧಾನ ಉಳಿಸಿಕೊಳ್ಳದಿದ್ದರೆ ಹಕ್ಕು ಮತ್ತು ಸೌಲಭ್ಯ ಕಳೆದುಕೊಳ್ಳಬೇಕು: ಎಂ.ಪರಮೇಶ್
ಬೆಂಗಳೂರು, ಜ.27: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ಉಳಿಸಿಕೊಳ್ಳದಿದ್ದರೆ ಮುಂದೊಂದು ದಿನ ದೀನ ದಲಿತ ಹಾಗೂ ಹಿಂದುಳಿದ ಅಲ್ಪಸಂಖ್ಯಾತರಿಗಾಗಿ ರಚಿಸಲಾದ ಹಕ್ಕು ಮತ್ತು ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ರಾಜ್ಯಾಧ್ಯಕ್ಷ್ಷ ಎಂ.ಪರಮೇಶ್ ತಿಳಿಸಿದ್ದಾರೆ.
ರವಿವಾರ ಯಶವಂತಪುರದ ಮುನಿಸ್ವಾಮಪ್ಪ ಕಲ್ಯಾಣ ಮಂಟಪದಲ್ಲಿ ಅಂಬೇಡ್ಕರ್ ದಲಿತ ಸೇನೆ ವತಿಯಿಂದ ಹಮ್ಮಿಕೊಂಡಿದ್ದ, ಸಂವಿಧಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಜನತೆ ಮುಂದೆ ಬಂದು ಸಂವಿಧಾನ ರಕ್ಷಿಸುವ ಪಣ ತೊಡಬೇಕು. ಸಂವಿಧಾನ ರಚಿಸುವ ಮುನ್ನ ಹೆಣ್ಣು ಮಕ್ಕಳಿಗೆ, ದಲಿತರಿಗೆ, ಶೋಷಿತರಿಗೆ ಮತದಾನದ ಹಕ್ಕು ಅಧಿಕಾರ ಸಿಕ್ಕಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ರವರು ಸಂವಿಧಾನದಲ್ಲಿ ನಮಗೆ ಮಾನ್ಯತೆ ದೊರಕಿಸಿಕೊಟ್ಟಿದ್ದರಿಂದ ಮಹಿಳೆಯರು ಹಾಗೂ ದಲಿತರು ಹಿಂದುಳಿದ ಜನಾಂಗದವರು, ರಾಷ್ಟ್ರಪತಿ, ಪ್ರಧಾನಮಂತ್ರಿ. ಮುಖ್ಯಮಂತ್ರಿ ಮುಖ್ಯಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರುಗಳಂತಹ ಉನ್ನತ ಸ್ಥಾನಗಳಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರೂ, ಮೇಲ್ವರ್ಗದ ಜನ ಮತ್ತು ಅಧಿಕಾರಿಗಳು ಹೆಣ್ಣು ಮಕ್ಕಳು, ದಲಿತಯರನ್ನು ತುಳಿಯುವ ಕೆಲಸ ಇಂದಿಗೂ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು.
ಸಂವಿಧಾನವನ್ನು ತಿರುಚುವುದು ಕಾನೂನು ಬಾಗಿರವಾಗಿದ್ದು, ದಲಿತರು, ಹಿಂದುಳಿದವರು, ಶೋಷಿತ ಜನಾಂಗದವರು ಸಂಘಟಿತರಾಗಿ ಸಂವಿಧಾನವನ್ನು ಉಳಿಸಿ, ರಕ್ಷಿಸಿಕೊಳ್ಳಬೇಕಾದ ತುರ್ತು ಅವಶ್ಯಕತೆ ಇದೆ. ಅಲ್ಲದೆ, ಇಂದಿಗೂ ದಲಿತರ ಮೇಲೆ ಅಧಿಕಾರಿಗಳು ಶೋಷಣೆ, ದಬ್ಬಾಳಿಕೆ ಮಾಡುವ ಮೂಲಕ ರಾತ್ರೋರಾತ್ರಿ ದಲಿತರ ಪಹಣಿ ತಿದ್ದಿ ಸ್ನೇಹಿತರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದರು.