ಮೋದಿ ಸರಕಾರದ ಮೀಸಲಾತಿ ಜಾರಿ ಚುನಾವಣೆ ಗಿಮಿಕ್: ದಿನೇಶ್ ಗುಂಡೂರಾವ್
ಬೆಂಗಳೂರು, ಜ.29: ಇದುವರೆಗೂ ಜನಸ್ನೇಹಿ ಆಡಳಿತ ನೀಡದ ಕೇಂದ್ರದ ಮೋದಿ ಸರಕಾರ, ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಜಾರಿ ಮಾಡಿರುವುದು ಚುನಾವಣೆಗಾಗಿಯೇ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ನಾಲ್ಕುವರೆ ವರ್ಷಗಳಲ್ಲಿ ಯಾವುದೇ ಉತ್ತಮ ಹಾಗೂ ಹೇಳಿಕೊಳ್ಳುವಂತಹ ಕೆಲಸವನ್ನು ಮಾಡದ ಕೇಂದ್ರದ ಮೋದಿ ಸರಕಾರ ಕಡೆಯ ಹಂತದಲ್ಲಿ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ, ರೈತರ ಪರ ಧ್ವನಿ ಎತ್ತುವ ಕಾರ್ಯ ಮಾಡುತ್ತಿದೆ. ಇದೆಲ್ಲವೂ ಚುನಾವಣೆಗಾಗಿ ಎನ್ನುವುದು ಜನರಿಗೂ ಗೊತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆಯಷ್ಟೇ ಯೋಜನೆಗಳನ್ನು ಘೋಷಿಸಿದ್ದಾರೆ. ಯಾರು ಉದ್ಯೋಗ ಹಾಗೂ ಆಹಾರವಿಲ್ಲದೆ ಸಮಸ್ಯೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಕನಿಷ್ಠ ಆದಾಯ ಖಾತ್ರಿ ಯೋಜನೆ ಘೋಷಿಸಿದ್ದಾರೆ ಎಂದು ತಿಳಿಸಿದರು.
ಯುಪಿಎ ಜನಸ್ನೇಹಿ
ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರದ ಆಡಳಿತದಲ್ಲಿ ಸಾಕಷ್ಟು ಜನ ಸ್ನೇಹಿ, ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅಂದಿನ ಸರಕಾರ ಆರಂಭಿಸಿದ್ದ ನರೇಗಾ ಯೋಜನೆ ಅತ್ಯಂತ ಫಲಪ್ರದವಾಗಿ ಜನರಿಗೆ ಲಭಿಸಿತ್ತು. ನರೇಗಾ ಯೋಜನೆಯಿಂದಾಗಿ 2004 ರಿಂದ 2012 ರ ನಡುವಿನ ಅವಧಿಯಲ್ಲಿ ಬಡತನ ರೇಖೆಗಿಂತ ಕೆಳಗಿನವರ ಸಂಖ್ಯೆ ಶೇ. 37.2 ರಿಂದ 21.9 ಕ್ಕೆ ಇಳಿದಿತ್ತು. ಇದರಿಂದ 24 ಕೋಟಿ ಮಂದಿ ಬಡತನ ರೇಖೆಯಿಂದ ಹೊರಬಂದಿದ್ದರು ಎಂದು ತಿಳಿಸಿದರು. ಇದರ ಉದ್ದೇಶ ಜನರಿಗೆ ಅನುಕೂಲ ಒದಗಿಸುವ ಜೊತೆಗೆ ದೇಶದ ಸಂಪನ್ಮೂಲವನ್ನು ಪ್ರತಿಯೊಬ್ಬರಿಗೂ ನೀಡುವ ಆಶಯವನ್ನು ಹೊಂದಿತ್ತು. ಅಂದು ಅಪೌಷ್ಠಿಕತೆಯಿಂದ ನರಳುತ್ತಿದ್ದವರ ಸಂಖ್ಯೆ ಕೂಡ ಕಡಿಮೆ ಇತ್ತು. ಅಲ್ಲದೆ, ಮಕ್ಕಳ, ಮಹಿಳೆಯರ ಆರೋಗ್ಯ ಸ್ಥಿತಿ ಕೂಡ ಸುಧಾರಿಸಿತ್ತು. ಇದರಿಂದ ಗ್ರಾಮೀಣ ಭಾಗದ ಜನತೆಗೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಅನುಕೂಲ ಕಲ್ಪಿಸಿಕೊಡಲಾಗಿತ್ತು. ವಿಶೇಷ ಎಂದರೆ ಹಲವು ಯೋಜನೆಗಳನ್ನು ಬೃಹತ್ ಮಟ್ಟದಲ್ಲಿ ಸ್ಥಾಪಿಸಿ ಅನುಕೂಲ ಕಲ್ಪಿಸಿಕೊಡಲಾಗಿತ್ತು. ಅಲ್ಲದೆ, ಬಹುದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡಲಾಗಿತ್ತು ಎಂದು ವಿವರಿಸಿದರು.