ಸಾಲ ಸೌಲಭ್ಯಕ್ಕೆ ಸಹಕಾರಿ ಬ್ಯಾಂಕ್ಗಳು ಅಗತ್ಯ: ಕೃಷ್ಣ ಬೈರೇಗೌಡ
ಬೆಂಗಳೂರು, ಆ.25: ದೇಶದಲ್ಲಿ ಯಾವುದೇ ಕೈಗಾರಿಕೆ ನಡೆಸಲು ಬ್ಯಾಂಕುಗಳಿಂದ ಸಾಲ ಸೌಲಭ್ಯಗಳು ಸಿಗುವುದು ದುಸ್ಥರವಾಗಿದೆ. ಹೀಗಾಗಿ, ಸ್ಥಳಿಯರಿಗೆ ಸಾಲ ಸೌಲಭ್ಯ ನೀಡುವ ನಿಟ್ಟಿನಲ್ಲಿ ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪಿಸಲಾಗಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ನಗರದ ಜಕ್ಕೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಹಾಗೂ ಜಕ್ಕೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೊಸೈಟಿಗಳು ಆಲದ ಮರವಿದ್ದಂತೆ, ಇದನ್ನು ಬೆಳೆಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಆಗ ಸಕಾಲಕ್ಕೆ ಬಡವರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ಈ ಭಾಗದಲ್ಲಿ ದುಡಿಯುವ ಶ್ರಮಿಕ ವರ್ಗವಿದೆ. ಆದರೆ, ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ. ಇಂತಹ ಜನರಿಗೆ ಕೋ ಆಪರೇಟಿವ್ ಸೊಸೈಟಿ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಜಕ್ಕೂರಿನಲ್ಲಿ ಚಿಕ್ಕದಾದ ಸಮುದಾಯ ಭವನ ಇತ್ತು. ಇದೀಗ ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಾಣ ಮಾಡಿದ್ದೇವೆ. ಇನ್ನೂ ಕಾಮಗಾರಿ ಬಾಕಿ ಇದ್ದು, 70ಲಕ್ಷ ರೂ ಅಗತ್ಯವಿದೆ. ಕಾಮಗಾರಿ ಪೂರ್ಣಗೊಂಡರೆ, ಬಡವರು ಅತಿ ಕಡಿಮೆ ಖರ್ಚಿನಲ್ಲಿ ಸಮಾರಂಭ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಹೆಣ್ಣು ಮಕ್ಕಳು ಸಾಲ ಸೌಲಭ್ಯವನ್ನು ಟಿವಿ, ಫ್ರಿಡ್ಜ್, ಚಿನ್ನಕೊಳ್ಳುವ ಬದಲು ಸ್ವಯಂ ಉದ್ಯೋಗ ಮಾಡಿಕೊಳ್ಳುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು. ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ವಾಪಾಸಾತಿ ಮಾಡಿದಾಗ ಸೊಸೈಟಿ ಬೆಳೆಯುವುದರ ಜೊತೆಗೆ ಇನ್ನಿತರರಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.