ನನ್ನ ಹಾಗೂ ಡಿಕೆಶಿ ನಡುವೆ ಯಾವುದೇ ವ್ಯವಹಾರಗಳು ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
ವಿಚಾರಣೆಗೆ ಹಾಜರಾಗಲು ಈ.ಡಿ. ನೋಟಿಸ್ ಹಿನ್ನೆಲೆಯಲ್ಲಿ ಶಾಸಕಿಯ ಪ್ರತಿಕ್ರಿಯೆ
ಬೆಂಗಳೂರು, ಸೆ.18: ‘’ನನ್ನ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ವ್ಯವಹಾರ ಇಲ್ಲ. ಆದರೂ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ನೋಟಿಸ್ ಬಂದಿದೆ. ನಾಳೆ ದೆಹಲಿಗೆ ತೆರಳಿ ಈ.ಡಿ. ಅಧಿಕಾರಿಗಳನ್ನು ಭೇಟಿಯಾಗುತ್ತೇನೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೆ.14ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕಾರಣಾಂತರದಿಂದ ತೆರಳಲು ಸಾಧ್ಯವಾಗಿಲ್ಲ. ಯಾವ ವಿಚಾರವಾಗಿ ತನಿಖೆಗೆ ಕರೆದಿದ್ದಾರೆ ಎಂಬ ಮಾಹಿತಿ ಇಲ್ಲ. ‘ವಿಚಾರಣೆಗೆ ಹಾಜರಾಗಿ’ ಎಂಬ ಒಂದು ಸಾಲಿನ ಪತ್ರ ಮಾತ್ರ ತಲುಪಿದೆ ಎಂದರು.
ಸೆ.14ಕ್ಕೆ ಬರಲು ಸಾಧ್ಯವಿಲ್ಲ ಅಂತ ಹೇಳಿದ್ದೆ. ಹೀಗಾಗಿ ನಾಳೆ ಹೋಗುತ್ತಿದ್ದೇನೆ. 184 ಜನರನ್ನು ಕರೆದಿದ್ದಾರೆ. ಅದರಲ್ಲಿ ನನಗೂ ಕರೆದಿದ್ದಾರೆ. ಯಾವ ವಿಚಾರಕ್ಕೆ ಕರೆದಿದ್ದಾರೆ ಅನ್ನೋದು ಗೊತ್ತಿಲ್ಲ. ನಾನು ಬೆಂಗಳೂರಿನಲ್ಲಿ ವಿಚಾರಣೆಗೆ ಬರುತ್ತೇನೆಂದು ಕೇಳಿಕೊಂಡಿದ್ದೇನೆ. ಈ ಬಗ್ಗೆ ಈ.ಡಿ.ಯಿಂದ ಉತ್ತರ ಬಂದಿಲ್ಲ ಎಂದರು.
ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ. ಹಾಗಿದ್ದರೂ ಯಾಕೆ ಕರೆದಿದ್ದಾರೆ ಎನ್ನೋದು ವಿಚಾರಣೆ ಗೆ ಹಾಜರಾದ ಬಳಿಕ ಗೊತ್ತಾಗಬೇಕಷ್ಟೇ ಎಂದವರು ಹೇಳಿದ್ದಾರೆ.