ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಭೇದಿಸಿದ ಸಿಸಿಬಿ ಪೊಲೀಸರು: 1 ಕೋಟಿ ರೂ. ಮೌಲ್ಯದ ಮಾಲು ಜಪ್ತಿ
ಇಬ್ಬರ ಬಂಧನ
ಬೆಂಗಳೂರು, ನ.29: ಕೆನಡಾ ದೇಶದಿಂದ ಭಾರತಕ್ಕೆ ಮಾದಕ ದ್ರವ್ಯಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಸುಮಾರು 1 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪಶ್ಚಿಮ ಬಂಗಾಳ ಮೂಲದ ಅತೀಫ್ ಸಲೀಂ(26) ಮತ್ತು ರೋಹಿತ್ ದಾಸ್(26) ಎಂಬವರು ಬಂಧಿತ ಆರೋಪಿಗಳೆಂದು ಅವರು ತಿಳಿಸಿದರು.
ಆರೋಪಿ ಅತೀಫ್ ಸಲೀಂ, ಡಾರ್ಕ್ ವೆಬ್ ಹೆಸರಿನಲ್ಲಿ ವೆಬ್ಸೈಟ್ ಸೃಷ್ಟಿಸಿಕೊಂಡು, ಇದರ ಮೂಲಕ ಕೆನಡಾ ದೇಶದ ಹೈಡ್ರೋ ಗಾಂಜಾ ಮಾರಾಟ ಮಾಡುವ ವ್ಯಕ್ತಿಯನ್ನು ಸಂಪರ್ಕಿಸುತ್ತಿದ್ದ. ತದನಂತರ, ವಿಕ್ಕರ್ ಮಿ (wickr me) ಎಂಬ ಆ್ಯಪ್ ಮುಖಾಂತರ ಪರಸ್ಪರ ಸಂಪರ್ಕ ಸಾಧಿಸಿ ಮಾದಕ ವಸ್ತುಗಳಿರುವ ಹೈಡ್ರೋ ಗಾಂಜಾ, ಗಾಂಜಾ ಚಾಕೋಲೇಟ್ ಮತ್ತು ಆಶಿಷ್ ಆಯಿಲ್, ಇ-ಸಿಗರೇಟ್ ಟ್ಯೂಬ್ಗಳನ್ನು ಖರೀದಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದರು.
ಕೆನಡಾದಲ್ಲಿರುವ ವ್ಯಕ್ತಿ ಸೂಚಿಸುವ ಗಿರಾಕಿಗಳ ವಿಳಾಸಗಳಿಗೆ ಮಾದಕ ವಸ್ತುಗಳನ್ನು ಅಮೆಜಾನ್ ಹೆಸರಿನ ಚೀಲಗಳಲ್ಲಿ ಕಟ್ಟಿಕೊಂಡು ಕೊರಿಯರ್ ಮೂಲಕ ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ಕಳುಹಿಸುತ್ತಿದ್ದ. ಇದಕ್ಕಾಗಿ, ಮಾದಕ ವಸ್ತುಗಳ ಮಾರಾಟದ ಒಂದು ಪಾಲು ಲಾಭವನ್ನು ಆತ ತೆಗೆದುಕೊಳ್ಳುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ ಎಂದು ಆಯುಕ್ತರು ಹೇಳಿದರು.
ಕೆನಡಾದಿಂದ ರವಾನೆ: ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬರದಂತೆ ಮಕ್ಕಳ ಹಾಲಿನ ಪುಡಿ ಡಬ್ಬಗಳಲ್ಲಿ ರಹಸ್ಯವಾಗಿ ಹೈಡ್ರೋ ಗಾಂಜಾವನ್ನು ಅಡಗಿಸಿಟ್ಟು ಕೆನಡಾದಿಂದ ಕೊರಿಯರ್ ಮೂಲಕ ಭಾರತಕ್ಕೆ ರವಾನಿಸಲಾಗುತ್ತಿತ್ತು. ಈ ರೀತಿ, ಬರೋಬ್ಬರಿ 2.750 ಕೆಜಿ ತೂಕದ ಹೈಡ್ರೋ ಗಾಂಜಾ ಇರುವ 14 ಚೀಲಗಳನ್ನು ಹಾಲಿನ ಡಬ್ಬಗಳಲ್ಲಿ ಅಡಗಿಸಿದ್ದು, ಸಾವಿರಾರು ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ ಎಂದರು.
ಆರೋಪಿಯು ಮಾದಕ ವ್ಯಸನಿಗಳಾಗುವ ವ್ಯಕ್ತಿಗಳಿಗೆ ಮಾದಕ ವಸ್ತುವಿನ ಚಟ ಅಂಟಿಸಲು ಗಾಂಜಾ ಫ್ಲೇವರ್ನ ಚಾಕ್ಲೇಟ್ ಮತ್ತು ಪೆಪ್ಪರ್ ಮೆಂಟ್(ಜೆಲ್ಲಿ)ಗಳನ್ನು ಕೆನಡಾದಿಂದ ಖರೀದಿಸಿದ್ದ. ಈ ಸಂಬಂಧ 12 ಚಾಕ್ಲೇಟ್ ಪ್ಯಾಕೇಟ್ಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ, ಹ್ಯಾಶಿಷ್ ಆಯಿಲ್ ಒಳಗೊಂಡ ವೀಡ್ ಫ್ಲೇವರ್ನ 100 ಸಿಗರೇಟು(900 ಗ್ರಾಂ) ಟ್ಯೂಬ್, ಗಾಂಜಾ ಎಲೆಗಳನ್ನು ಪುಡಿ ಮಾಡಲು ಬಳಸುವ 3 ಚಿಕ್ಕ ಗಾಂಜಾ ಕ್ರಷರ್ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಪಿ ಅತೀಫ್ ಸಲೀಂನಿಂದ ಒಂದು ಕಾರು, ಬೈಕ್, 1 ಲಕ್ಷ ರೂ.ನಗದು ಜಪ್ತಿ ಮಾಡಲಾಗಿದ್ದು, ಎಲ್ಲ ಮಾದಕ ವಸ್ತುಗಳ ಒಟ್ಟು ಮೌಲ್ಯ 1 ಕೋಟಿ ರೂ. ಆಗಿದ್ದು, ಈ ಸಂಬಂಧ ಆರೋಪಿಗಳ ವಿರುದ್ಧ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಕುಲ್ದೀಪ್ ಕುಮಾರ್ ಜೈನ್ ಸೇರಿದಂತೆ ಪ್ರಮುಖರಿದ್ದರು.
‘ಅಮೆಜಾನ್ ವಿರುದ್ಧ ಕ್ರಮ’
ಕಾನೂನು ಬಾಹಿರ ಮಾದಕ ವಸ್ತು ಸಾಗಾಟ ಆರೋಪದಡಿ ಅಮೆಜಾನ್ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.