ಉತ್ತಮ ಆರೋಗ್ಯಕ್ಕೆ ಕ್ರೀಡೆ ಅಗತ್ಯ: ನಾಗಣ್ಣ ಬೋರೇಗೌಡ
ಜೂನಿಯರ್ ಹಾಗೂ ಸಬ್ ಜೂನಿಯರ್ ಮಟ್ಟದ ಕ್ರೀಡಾಕೂಟ
ಬೆಂಗಳೂರು, ಡಿ.28: ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾನಸಿಕ, ದೈಹಿಕವಾಗಿ ಹಾಗೂ ಉತ್ತಮ ಆರೋಗ್ಯ ಪಡೆಯಲು ಕ್ರೀಡೆಗಳು ಜೀವನದಲ್ಲಿ ಬಹಳ ಅವಶ್ಯಕ ಎಂದು ಕೆಸ್ಟೋಬಾಲ್ ಫೆಡರೇಷನ್ ಆಫ್ ಇಂಡಿಯಾ(ಸಿಎಫ್ಐ) ರಾಷ್ಟ್ರೀಯ ಅಧ್ಯಕ್ಷ ನಾಗಣ್ಣ ಬೋರೇಗೌಡ ಹೇಳಿದರು.
ಶನಿವಾರ ನಗರದ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಕೆಸ್ಟೋ ಬಾಲ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಇಂಟರ್ ನ್ಯಾಷನಲ್ ಕೆಸ್ಟೋ ಬಾಲ್ ಫೆಡರೇಷನ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ, ಜೂನಿಯರ್ ಹಾಗೂ ಸಬ್ ಜೂನಿಯರ್ ಮಟ್ಟದ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಕ್ರೀಡೆಗಳ ಅವಶ್ಯಕತೆ ಹೆಚ್ಚಾಗಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರು ವ್ಯವಸಾಯದಲ್ಲಿ ತೊಡಗಿಕೊಂಡು ಉತ್ತಮ ಆಹಾರ ಪದಾರ್ಥಗಳನ್ನು ಸೇವಿಸಿ ನೂರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಆಧುನಿಕತೆ ಹೆಚ್ಚಾದಂತೆ ಮನುಷ್ಯ ಹಲವು ರೀತಿಯ ರೋಗಗಳಿಗೆ ಒಳಗಾಗುತ್ತಿದ್ದಾನೆ. ಈ ನಿಟ್ಟಿನಲ್ಲಿ ಮನುಷ್ಯ ಆರೋಗ್ಯವಾಗಿ ಜೀವನ ನಡೆಸಲು ಕ್ರೀಡೆಗಳಲ್ಲಿ ಭಾಗವಹಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕೆಸ್ಟೋಬಾಲ್ ಫೆಡರೇಷನ್ ಆಫ್ ಇಂಡಿಯಾ(ಸಿಎಫ್ಐ)ದ ಮುಖ್ಯಸ್ಥ ಬಿ.ಎಸ್.ರಫೀಉಲ್ಲಾ ಮಾತನಾಡಿ, ಡಿಸೆಂಬರ್ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಜೂನಿಯರ್ ಹಾಗೂ ಸಬ್ ಜೂನಿಯರ್ ಮಟ್ಟದ ಕ್ರೀಡಾಕೂಟದಲ್ಲಿ 36 ತಂಡಗಳು ಭಾಗಿಯಾಗಿದ್ದವು.2020ರ ಮಾರ್ಚ್ನಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಉತ್ತರಪ್ರದೇಶದಲ್ಲಿ ಹಾಗೂ ಎಪ್ರಿಲ್ನಲ್ಲಿ ಬೆಂಗಳೂರಿನಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಿಎಫ್ಐ ಮಹಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆಖಿಬ್, ಕಾರ್ಯಕರ್ಶಿ ಕೆ.ಎಸ್.ಶೃತಿ, ರಾಜೇಶ್ ಟಿ.ಬಿ.ಶರಣಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅರ್ಜೆಂಟೀನಾ ದೇಶದ ದೈಹಿಕ ಶಿಕ್ಷಣದ ಪಿತಾಮಹ ಎಂದು ಕರೆಸಿಕೊಳ್ಳುವ ಪ್ರೊ.ಎನ್ರೀಕ್ ರೊಮೆರೋ ಬ್ರೀಸ್ಟ್ 1903ರ ಮಾ.17ರಂದು ರೂಪಿಸಿದ ಕೆಸ್ಟೋ ಬಾಲ್ ಕ್ರೀಡೆಯನ್ನು ಇದೀಗ ಭಾರತದಲ್ಲಿಯೂ ಪರಿಚಯಿಸಲು ನಾವು ಮುಂದಾಗಿದ್ದೇವೆ.
-ಬಿ.ಎಸ್.ರಫೀಉಲ್ಲಾ, ಮುಖ್ಯಸ್ಥ ಸಿಎಫ್ಐ