ಹಣ ಸಂಗ್ರಹದ ಬಗ್ಗೆ ವಿವರಣೆ ನೀಡಿ: ಹೈಕೋರ್ಟ್ ಸೂಚನೆ
ಕಾವೇರಿ ಕೂಗು ಯೋಜನೆ
ಬೆಂಗಳೂರು, ಜ.7: ಕಾವೇರಿ ಕೂಗು ಯೋಜನೆಯಡಿ ಗಿಡ ಬೆಳೆಸಲು ಸಾರ್ವಜನಿಕರಿಂದ ಹಣ ಪಡೆಯುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಪರಿಸರ ಜಾಗೃತಿ ಬಗ್ಗೆ ಪ್ರಚಾರ ನಡೆಸಲಿ ಅದನ್ನು ಬಿಟ್ಟು ಹಣ ಸಂಗ್ರಹಿಸಲು ಮುಂದಾಗಿರುವುದು ಯಾಕೆ ಎಂಬುದರ ಬಗ್ಗೆ ವಿವರಣೆ ನೀಡಲು ಹೈಕೋರ್ಟ್ ಇಶಾ ಫೌಂಡೇಶನ್ಗೆ ಸೂಚಿಸಿದೆ. ಈ ಕುರಿತು ವಕೀಲ ಎ.ವಿ.ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರಕಾರದ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪವಿದೆ. ಹೀಗಾಗಿ, ಹಣ ಸಂಗ್ರಹಿಸುತ್ತಿರುವ ಬಗ್ಗೆ ಹಾಗೂ ಹಣ ನೀಡಲು ಒತ್ತಾಯಿಸುತ್ತಿಲ್ಲ ಎಂಬುದರ ಬಗ್ಗೆ ವಿವರಣೆ ನೀಡಬೇಕೆಂದು ಇಶಾ ಫೌಂಡೇಶನ್ಗೆ ಸೂಚಿಸಿತು. ಇಶಾ ಫೌಂಡೇಶನ್ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೂ ಎಲ್ಲವೂ ಕಾನೂನಿನ ಚೌಕಟ್ಟಿನ ಅಡಿಯಲ್ಲಿಯೇ ನಡೆಯುತ್ತಿವೆ. ಅದೇ ರೀತಿಯಾಗಿ ಕಾವೇರಿ ಕೂಗು ಯೋಜನೆ ಕೂಡ ಕಾನೂನಿನ ಅಡಿಯಲ್ಲಿಯೇ ಇರಬೇಕೆಂದ ನ್ಯಾಯಪೀಠವು ಸರಕಾರ ಹಣ ಸಂಗ್ರಹದ ಬಗ್ಗೆ ಯಾಕೆ ವಿಚಾರಣೆ ನಡೆಸಿಲ್ಲ ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸರಕಾರದ ಪರ ವಕೀಲರು, ಇಶಾ ಫೌಂಡೇಶನ್ಗೆ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದೇವೆ. ಈವರೆಗೆ ಯಾರೂ ಹಣ ಸಂಗ್ರಹದ ಬಗ್ಗೆ ದೂರು ನೀಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಇಶಾ ಫೌಂಡೇಶನ್ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು, ಸಮರ್ಪಕ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಬೇಕೆಂದು ಪೀಠಕ್ಕೆ ಮನವಿ ಮಾಡಿದರು. ನ್ಯಾಯಪೀಠವು ಆಕ್ಷೇಪಣೆ ಸಲ್ಲಿಕೆಗೆ ಎರಡು ವಾರ ಸಮಯಾವಕಾಶ ನೀಡಿ, ವಿಚಾರಣೆಯನ್ನು ಮುಂದೂಡಿತು. ಆಕ್ಷೇಪಣೆ ಏನು: ಕಾವೇರಿ ತಟದ 639 ಕಿ.ಮೀ ಉದ್ದಗಲಕ್ಕೂ 253 ಕೋಟಿ ಗಿಡ ನೆಡಲು ಇಶಾ ಫೌಂಡೇಶನ್ ಉದ್ದೇಶಿಸಿದೆ. ಇದಕ್ಕಾಗಿ ಸಾರ್ವಜನಿಕರಿಂದ 1 ಗಿಡಕ್ಕೆ 42ರೂ. ಪಡೆಯಲು ಮುಂದಾಗಿದೆ. ಇದರ ಒಟ್ಟು ಮೊತ್ತ 10,626 ಕೋಟಿ ಆಗುತ್ತದೆ. ಇದೊಂದು ಆತಂಕಕಾರಿ ವಿಚಾರ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಈ ಅರ್ಜಿ ಇತ್ಯರ್ಥವಾಗುವ ತನಕ ಇಶಾ ಫೌಂಡೇಶನ್ ಕಾವೇರಿ ಕೂಗು ಯೋಜನೆಯಡಿ ಯಾವುದೇ ಹಣ ಸಂಗ್ರಹ ಮಾಡದಂತೆ ತಡೆ ನೀಡಬೇಕು ಎಂದು ಕೋರಿದ್ದಾರೆ.