ಉನ್ನತ ಶಿಕ್ಷಣಕ್ಕೆ ಬಜೆಟ್ನಲ್ಲಿ 4,500 ಕೋಟಿ ರೂ. ಅನುದಾನಕ್ಕೆ ಬೇಡಿಕೆ: ಡಾ.ಅಶ್ವಥ್ ನಾರಾಯಣ
ಬಜೆಟ್ ಪೂರ್ವಭಾವಿ ಸಭೆ
ಬೆಂಗಳೂರು, ಫೆ. 3: ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ನಮ್ಮ ಆದ್ಯತೆ. ಅದಕ್ಕಾಗಿಯೇ ಈ ಬಜೆಟ್ನಲ್ಲಿ 4,500 ಕೋಟಿ ರೂ.ಅನುದಾನ ನೀಡಬೇಕೆಂದು ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಸೋಮವಾರ ಹಣಕಾಸು ಸಚಿವರೂ ಆಗಿರುವ ಸಿಎಂ ಯಡಿಯೂರಪ್ಪಅಧ್ಯಕ್ಷತೆಯಲ್ಲಿ ನಡೆದ 2020-21ನೆ ಸಾಲಿನ ಬಜೆಟ್ ಪೂರ್ವಭಾವಿ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಉನ್ನತ ಶಿಕ್ಷಣ, ವಿಜ್ಞಾನ ತಂತ್ರಜ್ಞಾನ, ಐಟಿ-ಬಿಟಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಕೋರಿರುವುದಾಗಿ ತಿಳಿಸಿದರು.
ಸರಕಾರಿ ಕಾಲೇಜುಗಳಲ್ಲಿ ಗುಣಮಟ್ಟ ಹೆಚ್ಚಿಸುವುದು ಪ್ರಮುಖ ವಿಚಾರ, ಪದವಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸುವ ಜತೆಗೆ ಹೊಸದಾಗಿ ಪ್ರಾರಂಭವಾಗಿರುವ ವಿವಿಗಳ ಸುಧಾರಣೆಗೆ ಒತ್ತು ನೀಡಬೇಕು. ಕಾಲೇಜು ಶಿಕ್ಷಣಕ್ಕೆ 1,463 ಕೋಟಿ ರೂ., ತಾಂತ್ರಿಕ ಶಿಕ್ಷಣಕ್ಕೆ 369 ಕೋಟಿ ರೂ., ಬೆಂಗಳೂರು ಕೇಂದ್ರ ವಿವಿ ಹಾಗೂ ಉತ್ತರ ವಿವಿಗೆ ತಲಾ 500 ಕೋಟಿ ರೂ., ಸಂಸ್ಕೃತ ವಿವಿಗೆ 300 ಕೋಟಿ ರೂ., ರಾಣಿ ಚೆನ್ನಮ್ಮ ವಿವಿಗೆ 500 ಕೋಟಿ ರೂ. ಸೇರಿದಂತೆ ವಿವಿಗಳ ಅಭಿವೃದ್ಧಿಗೆ ಒಟ್ಟು 3,800 ಕೋಟಿ ರೂ.ಬೇಡಿಕೆ ಸಲ್ಲಿಸಲಾಗಿದೆ.
ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೊಮಾ ಕಾಲೇಜು ಹಾಗೂ ಹೊಸ ಎಂಜಿನಿಯರಿಂಗ್ ಕಾಲೇಜುಗಳ ಸುಧಾರಣೆಗೆ ಬಹಳಷ್ಟು ಹಣ ಬೇಕಿರುವುದರಿಂದ ಒಟ್ಟಾರೆ 4,500 ಕೋಟಿ ರೂ.ಅನುದಾನ ಕೋರಲಾಗಿದೆ ಎಂದು ವಿವರಿಸಿದರು. ಐಟಿ-ಬಿಟಿ ಕ್ಷೇತ್ರದ ಅಭಿವೃದ್ಧಿಗೆ ಒಲವು ತೋರಿರುವ ಸಿಎಂ ಅನುದಾನ ಹೆಚ್ಚಿಸಲು ಆಸಕ್ತಿ ತೋರಿದ್ದಾರೆ. ಈಗಿನ 120 ಕೋಟಿ ರೂ.ಗಿಂತ ಮೂರು ಪಟ್ಟು ಹೆಚ್ಚು ಅಂದ್ರೆ 342 ಕೋಟಿ ರೂ. ಅನುದಾನ ಕೇಳಿದ್ದೇವೆ. ರಾಜ್ಯದಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್, ಇನ್ನೋವೇಷನ್ ಸೆಂಟರ್, ಟ್ಯಾಲೆಂಟ್ ಆಕ್ಸಿಲರೇಟರ್, ಆಗ್ರೋ ಇನ್ನೋವೇಶನ್ ಸೆಂಟರ್ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಹೆಚ್ಚಿನ ಹಣದ ಅಗತ್ಯ ಇದೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.
ಹೊಸ ವೈದ್ಯಕೀಯ ಕಾಲೇಜುಗಳ ಬೇಡಿಕೆ ಕೇಳಿ ಬರುತ್ತಲೇ ಇದ್ದು, ಸಮಗ್ರ ಅಭಿವೃದ್ಧಿಗೆ 1,500 ಕೋಟಿ ರೂ.ಬೇಡಿಕೆ ಇಟ್ಟಿದ್ದೇವೆ. ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪಿಸುವ ಉದ್ದೇಶ ಇದೆ. ಕೆಸಿ ಜನರಲ್ ಆಸ್ಪತ್ರೆ ಸೇರಿ ಹಲವು ಜಿಲ್ಲೆಗಳ ಪ್ರಮುಖ ಆಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆ ಒದಗಿಸುವ ಗುರಿ ಇದೆ.
ಅಲ್ಲದೆ, ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಸಿಮಿಲೇಷನ್ ಲ್ಯಾಬ್ ಸ್ಥಾಪಿಸಲು ಅಗತ್ಯ ನೆರವು ಕೋರಲಾಗಿದೆ. ಎಲ್ಲ ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ಪ್ರಯೋಗಾಲಯ ಮಾನ್ಯತಾ ಮಂಡಳಿ(ಎನ್ಎಬಿಎಲ್), ರಾಷ್ಟ್ರೀಯ ಆಸ್ಪತ್ರೆಯ ಮಾನ್ಯತಾ ಮಂಡಳಿ(ಎನ್ಎಬಿಎಚ್) ಮಾನ್ಯತೆ ಪಡೆಯುವ ಸಂಬಂಧ 300 ಕೋಟಿ ರೂ.ಬೇಡಿಕೆ ಮುಂದಿಡಲಾಗಿದೆ ಎಂದರು.