ಮಧ್ಯಪ್ರದೇಶ ಶಾಸಕರ ಭೇಟಿ ವೇಳೆ ಪೊಲೀಸರ ದುರ್ವರ್ತನೆ ಆರೋಪ: ಎಡಿಜಿಪಿಗೆ ದೂರು ಸಲ್ಲಿಸಿದ ಕಾಂಗ್ರೆಸ್ ನಿಯೋಗ
ಬೆಂಗಳೂರು, ಮಾ.13: ಮಧ್ಯಪ್ರದೇಶ ಸಚಿವರ ತಂದೆ ಮೇಲೆ ಪೊಲೀಸರಿಂದ ದುರ್ವರ್ತನೆ ಆರೋಪ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದ ನಿಯೋಗವು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದೆ.
ಶುಕ್ರವಾರ ನೃಪತುಂಗ ರಸ್ತೆಯ ಪೊಲೀಸ್ ಕಚೇರಿಯಲ್ಲಿ ಎಡಿಜಿಪಿ ಅಮರ್ ಪಾಂಡೆ ಅವರನ್ನು ಭೇಟಿ ಮಾಡಿದ ನಿಯೋಗದ ಸದಸ್ಯರು, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು. ಅದೇ ರೀತಿ, ರೆಸಾರ್ಟ್ನಲ್ಲಿರುವ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಧ್ಯಪ್ರದೇಶ ಸಚಿವ ಜೀತೂ ಪಟವಾರಿ, ಶಾಸಕರ ತಂದೆ ನಾರಾಯಣ ಚೌಧರಿ, ಮಾಜಿ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
‘ಮಗನ ಭೇಟಿಗೆ ಅವಕಾಶ ನೀಡಿ’
ರೆಸಾರ್ಟ್ನಲ್ಲಿ ಗುರುವಾರ ಶಾಸಕ ಮನೋಜ್ ಚೌಧರಿ ಅನ್ನು ಅವರ ತಂದೆ ನೋಡಲು ಹೋಗಿದ್ದಾರೆ. ತಂದೆ-ಮಗನ ನಡುವೆ ಭಾವನಾತ್ಮಕ ಸಂಬಂಧ ಇದೆ. ಆದರೆ, ಈ ವೇಳೆ ಪೊಲೀಸರು ಅವಕಾಶ ಮಾಡಿಕೊಟ್ಟಿಲ್ಲ. ಪೊಲೀಸರು ತಂದೆ-ಮಗನ ಭೇಟಿಗೆ ಅವಕಾಶ ಮಾಡಿಕೊಡಬೇಕು. ಅಲ್ಲದೆ, ಯಾವುದೇ ಬಿಜೆಪಿ ನಾಯಕರ ಮಧ್ಯಸ್ಥಿಕೆ ಇಲ್ಲದೇ, ಮಗನ ಭೇಟಿಗೆ ಅವಕಾಶ ಮಾಡಿಕೊಡಬೇಕು. ಇಲ್ಲಿ ರಾಜಕಾರಣವಿಲ್ಲ. ಮಗನ ಭೇಟಿ ಮಾಡಬೇಕಾಗಿರುವುದು ತಂದೆಯ ಹಕ್ಕಾಗಿದ್ದು, ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ