ಯಲಹಂಕ ಮೇಲ್ಸೇತುವೆಗೆ ಕೆ.ಎಸ್.ನಿಸಾರ್ ಅಹ್ಮದ್ ಹೆಸರಿಡಿ: ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜೀದ್
ಬೆಂಗಳೂರು, ಜೂ.19: ಯಲಹಂಕ ಮೇಲ್ಸೇತುವೆಗೆ ದಿವಗಂತ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅವರ ಹೆಸರಿಡುವಂತೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಆಗ್ರಹಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ, ಸಂವೇದನಾಶೀಲ ಕವಿ, ಯಾವುದೇ ಪಂಥಕ್ಕೂ ತನ್ನನ್ನು ಸೀಮಿತಗೊಳಿಸದ ಬರಹಗಾರ, ನಿತ್ಯೋತ್ಸವದ ಮೂಲಕ ನಾಡಿನ ಮನಗೆದ್ದ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅವರ ಹೆಸರು ಶ್ವಾಶತವಾಗಿ ಉಳಿಯಬೇಕೆಂದರೆ ನಗರದ ಯಲಹಂಕ ಮೇಲ್ಸೇತುವೆಗೆ ಅವರ ಹೆಸರಿಡುವ ಕಾರ್ಯ ನಡೆಯಬೇಕೆಂದರು.
ಯಾವುದೇ ರಸ್ತೆ ಅಥವಾ ಕಟ್ಟಡಗಳಿಗೆ ಆದರ್ಶ ವ್ಯಕ್ತಿಗಳ ಹೆಸರಿಡುವುದರಿಂದ ಅವರ ಆದರ್ಶಗಳು ಜನಮನದಲ್ಲಿ ಜೀವಂತವಾಗಿರುತ್ತದೆ. ಆದರೆ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದು ಹಾಸ್ಯಾಸ್ಪದ. ಇವರು ರಾಜ್ಯಕ್ಕೆ ನೀಡಿರುವ ಕೊಡುಗೆ ಆದರೂ ಏನು ಎಂದು ಅವರು ಪ್ರಶ್ನೆ ಮಾಡಿದರು.
ಯಲಹಂಕ ಮೇಲ್ಸೇತುವೆಗೆ ನಾಡುಪ್ರಭು ಕೆಂಪೇಗೌಡ ಅಥವಾ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅವರ ಹೆಸರಿಡಬೇಕೆಂದು ನಮ್ಮ ಆಗ್ರಹವಾಗಿದೆ ಎಂದ ಅವರು, ಈ ಸಂಬಂಧ ಬಿಬಿಎಂಪಿ ಮೇಯರ್, ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗುವುದು ಎಂದು ಅಬ್ದುಲ್ ವಾಜೀದ್ ನುಡಿದರು.