ಸುಗಮ ಶಿಕ್ಷಣ ವ್ಯವಸ್ಥೆಗಾಗಿ ಕೆಲವು ಸಲಹೆ: ಜಮಾಅತೆ ಇಸ್ಲಾಮಿ ಹಿಂದ್ ನಿಂದ ರಾಜ್ಯ ಶಿಕ್ಷಣ ಸಚಿವರಿಗೆ ಪತ್ರ
ಬೆಂಗಳೂರು, ಜು.19: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕ ಸಾಂಕ್ರಾಮಿಕ ರೋಗದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯಾದ್ಯಂತ ನಮ್ಮ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಸುಗಮವಾಗಿ ನಡೆಸಲು ರಾಜ್ಯ ಸರಕಾರ ಮತ್ತು ಶಿಕ್ಷಣ ಸಚಿವರಿಗೆ ಹಲವು ಮಹತ್ವದ ಸಲಹೆಗಳನ್ನು ನೀಡಿದೆ. ತಜ್ಞರ ವ್ಯಾಪಕ ಚರ್ಚೆಯ ನಂತರ, ಜಮಾಅತೆ ಇಸ್ಲಾಮಿ ಹಿಂದ್ ಕನಾಟಕ (ಶಿಕ್ಷಣ ವಿಭಾಗ) ರಾಜ್ಯ ಕಾರ್ಯದರ್ಶಿ ಹಾಫಿಝ್ ಮುಹಮ್ಮದ್ ಅಸ್ಲಮ್ ಶಿಕ್ಷಣ ಸಚಿವರಿಗೆ ಪತ್ರವೊಂದನ್ನು ಬರೆದಿದ್ದು ಅದರಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳ ಕುರಿತಂತೆ ಈ ಕೆಳಗಿನ ಸಲಹೆಗಳನ್ನು ನೀಡಿ ಸೂಕ್ತ ಪರಿಹಾರ ಕ್ರಮವನ್ನು ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
1. ಖಾಸಗಿ ಶಾಲಾ ಶಿಕ್ಷಕರಿಗೆ ಪಿಎಂ ಕೇರ್ಸ್ ಫಂಡ್ ಅಥವಾ ಇನ್ನಾವುದೇ ಸಂಬಂಧಿತ ಯೋಜನೆಯಿಂದ ಸರ್ಕಾರ ಸಹಾಯ ಮಾಡಬೇಕು.
2. ಪ್ರಾವಿಡೆಂಟ್ ಫಂಡ್ (ಪಿಎಫ್) ಇಲಾಖೆ / ಇಪಿಎಫ್ಒ ಖಾಸಗಿ ಶಾಲೆಗಳ ಶಿಕ್ಷಕರಿಗೆ ಮೂರು ವರ್ಷಗಳ ಕಾಲ ಬಡ್ಡಿರಹಿತ ಸಾಲ ನೀಡಬೇಕು.
3. ಎಂಎಸ್ಎಂಇ ಸಾಲದ ಮಾರ್ಗದಲ್ಲಿ ಯೋಜನೆಯನ್ನು ರೂಪಿಸಿರುವ ಕಾರಣ ಸರ್ಕಾರವು ಸಣ್ಣ ಖಾಸಗಿ ಶಾಲೆಗಳಿಗೆ ಬಡ್ಡಿರಹಿತ ಸಾಲ ನೀಡಬೇಕು.
4. ಹೊಮ್ ಸ್ಕೂಲಿಂಗ್ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕು. ಅದನ್ನು ನಿಯಂತ್ರಿಸುತ್ತ ಸುಗಮಗೊಳಿಸಬೇಕು.
5. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ರಾಜ್ಯ ಸರ್ಕಾರವು ಆನ್ಲೈನ್ ಬೋಧನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಆನ್ಲೈನ್ ವಿಷಯವನ್ನು ರಾಜ್ಯ ಸರಕಾರವು ಅಭಿವೃದ್ಧಿಪಡಿಸಬೇಕು.
6. ಸರ್ಕಾರವು ದೂರದರ್ಶನ / ಟಿವಿ ಚಾನೆಲ್ಗಳಲ್ಲಿ ವಿಷಯವನ್ನು ಪ್ರಸಾರ ಮಾಡಬೇಕು ಮತ್ತು ಅದು ಆನ್ಲೈನ್ನಲ್ಲಿ ಲಭ್ಯವಾಗಬೇಕು.
7. ಸ್ಮಾರ್ಟ್ಫೋನ್ ಹೊಂದಿಲ್ಲದ ವಿದ್ಯಾರ್ಥಿಗಳಿಗೆ ಸರ್ಕಾರವು ಸೀಮಿತ ಡೇಟಾ ಸೌಲಭ್ಯವನ್ನು ಒದಗಿಸಬೇಕು.
8. ಅಭಿವೃದ್ಧಿ ಉದ್ದೇಶಗಳಿಗಾಗಿ ಬಳಸಲಾಗುತ್ತಿರುವ ಸಿಎಸ್ಆರ್ ನಿಧಿಯ ಶೆ. 60% ವನ್ನು ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣ ವ್ಯವಸ್ಥೆಗೆ ಮೀಸಲಿಡಬೇಕು.