''ನೀವು ಬಯಾಲಜಿ ವಿದ್ಯಾರ್ಥಿಯೇ?'': ಗಂಟಲ ದ್ರವ ಸಂಗ್ರಹಿಸಿದ ಐಎಎಸ್ ಅಧಿಕಾರಿಗೆ ವೈದ್ಯಾಧಿಕಾರಿಗಳ ಪ್ರಶ್ನೆ
ಮುನೀಶ್ ಮೌದ್ಗಿಲ್
ಬೆಂಗಳೂರು, ಆ.25: ಯಾವುದೇ ರೀತಿಯ ಪರಿಣಿತಿ ಇಲ್ಲದಿದ್ದರೂ ಸ್ವಾಬ್ ಸಂಗ್ರಹಿಸಿದ್ದಾರೆ ಎಂದು ಕೋವಿಡ್ ವಾರ್ ರೂಮಿನ ಮುಖ್ಯಸ್ಥ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಮೇಲೆ ವೈದ್ಯಕೀಯ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ಕೋವಿಡ್ ವಾರ್ ರೂಂನ ಮುಖ್ಯಸ್ಥ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ನಗರದ ವಿದ್ಯಾಪೀಠ ಹೆಲ್ತ್ ಸೆಂಟರ್ ನಲ್ಲಿ ಗಂಟಲು ದ್ರವ ಸಂಗ್ರಹ ಮಾಡಿದ್ದಾರೆ. ಇದರಿಂದಾಗಿ ವೈದ್ಯಕೀಯ ವಲಯದಲ್ಲಿ ಈ ಕಾರ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಈ ಕುರಿತು ತಮ್ಮ ಆಕ್ರೋಶ ಹೊರಹಾಕಿರುವ ವೈದ್ಯಾಧಿಕಾರಿಗಳು, ನೀವು ಬಯಾಲಜಿ ವಿದ್ಯಾರ್ಥಿಯೇ ಎಂದು ಅಧಿಕಾರಿಗೆ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ನೀವು ಸರಿಯಾದ ರೀತಿಯಲ್ಲಿ ಗಂಟಲು ದ್ರವ ತೆಗೆದಿಲ್ಲ ಎಂಬುದು ವಿಡಿಯೋದಲ್ಲಿ ಬಹಿರಂಗವಾಗಿದೆ ಎಂದು ಕಿಡಿಕಾರಿದ್ದಾರೆ.
ಗಂಟಲ ದ್ರವ ತೆಗೆಯುವಾಗ ನೀವೊಬ್ಬರು ಮಾತ್ರ ಪಿಪಿಇ ಕಿಟ್ ಧರಿಸಿದ್ದೀರಿ. ಆದರೆ ನಿಮ್ಮ ಅಕ್ಕಪಕ್ಕದಲ್ಲಿದ್ದ ಆರೋಗ್ಯ ಅಧಿಕಾರಿಗಳು ಸರಿಯಾಗಿ ಪಿಪಿಇ ಕಿಟ್ ಹಾಗೂ ಕೈಗವಸು ಸಹ ಹಾಕಿಲ್ಲ. ಇದರಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾಂಪಲ್ ತೆಗೆಯಲು ನಿಮಗೆ ಅನುಮತಿ ನೀಡಿದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.