ಕೊರೋನ ಸೋಂಕಿತರನ್ನು ಸ್ಥಳಾಂತರಿಸಲು ಮೊದಲ ಬಾರಿಗೆ 'ಏರ್ ಆ್ಯಂಬುಲೆನ್ಸ್'
ಬೆಂಗಳೂರು, ಸೆ.1: ನಗರದಲ್ಲಿ ಕೊರೋನ ಸೋಂಕಿತರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಮೊಟ್ಟ ಮೊದಲ ಬಾರಿಗೆ ಏರ್ ಆ್ಯಂಬುಲೆನ್ಸ್ ಸೇವೆ ಪ್ರಾರಂಭವಾಗಲಿದೆ.
ಐಕಾತ್ ಕ್ಯಾತಿ ಏರ್ ಆ್ಯಂಬುಲೆನ್ಸ್ ನಿಂದ ಈ ಸೇವೆ ದೊರೆಯಲಿದ್ದು, ದಕ್ಷಿಣ ಭಾರತದಲ್ಲಿ ಜಕ್ಕೂರು ಏರೋಡ್ರಮ್ಸ್ ನಿಂದ ಏರ್ ಆ್ಯಂಬುಲೆನ್ಸ್ ಸೇವೆ ಅಸ್ತಿತ್ವಕ್ಕೆ ಬರಲಿದೆ. ಸೆಪ್ಟಂಬರ್ ತಿಂಗಳಿನಿಂದ ಹಾರಾಟ ನಡೆಸಲಿದೆ. ಸಾರ್ವಜನಿಕ ಸಂಪರ್ಕದಿಂದ ದೂರವಿರುವ ಹಳ್ಳಿಗಳಿಂದ ರೋಗಿಗಳನ್ನು ತುರ್ತಾಗಿ ಕರೆ ತರಲು ಏರ್ ಆ್ಯಂಬುಲೆನ್ಸ್ ಸಹಾಯ ಮಾಡಲಿದೆ. ಈ ಹೆಲಿಕಾಪ್ಟರ್ನಲ್ಲಿ ಒಬ್ಬರು ನರ್ಸ್ ಮತ್ತು ಇಬ್ಬರು ಪೈಲಟ್ಗಳು ಇರಲಿದ್ದಾರೆ.
ಈ ಕುರಿತು ಮಾತನಾಡಿರುವ ಐಕಾತ್ ಮಾರ್ಕೆಟಿಂಗ್ ಮುಖ್ಯಸ್ಥ ಪಾಹಿಮ್ ಹುಸೇನ್, ಬೆಂಗಳೂರಿನಿಂದ ಸೇವೆ ಆರಂಭಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮತಿ ನೀಡಿದ್ದಾರೆ. ಈ ಮೊದಲು ಮುಂಬೈ, ದಿಲ್ಲಿ ಮುಂತಾದ ನಗರಗಳಲ್ಲಿ ಮಾಡುತ್ತಿದ್ದೆವು. ಈಗ ಬೆಂಗಳೂರಿನಲ್ಲಿ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.
ಇದರಿಂದ ಎಮರ್ಜೆನ್ಸಿ ಇರುವ ರೋಗಿಗಳಿಗೆ ಶೀಘ್ರವಾಗಿ ಚಿಕಿತ್ಸೆ ದೊರೆಯಲಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ ಡಿ.ಜಿ. ಅವರಿಂದ ಅನುಮೋದನೆ ಪಡೆಯಲಾಗಿದೆ. ಈಗಾಗಲೇ ಏಳರಿಂದ ಎಂಟು ಏರ್ ಆ್ಯಂಬುಲೆನ್ಸ್ಗಳಲ್ಲಿ ಚಾರ್ಟೆಡ್ ಕ್ರಾಪ್ಟ್ ಅನ್ನು ತಾತ್ಕಾಲಿಕವಾಗಿ ಏರ್ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದ್ದಾರೆ.