ಯಲಹಂಕದ 'ಸಾವರ್ಕರ್ ಮೇಲ್ಸೇತುವೆ' ಸಿಎಂ ಯಡಿಯೂರಪ್ಪರಿಂದ ಲೋಕಾರ್ಪಣೆ
ಬೆಂಗಳೂರು, ಸೆ.8: ಯಲಹಂಕ ಉಪನಗರದ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಿದ್ದು, ಅದಕ್ಕೆ ವೀರ ಸಾವರ್ಕರ್ ಮೇಲ್ಸೇತುವೆ ಎಂದು ನಾಮಕರಣ ಮಾಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರೋತ್ಥಾನ ಅನುದಾನದಡಿ ನಿರ್ಮಾಣಗೊಂಡಿರುವ ಈ ಸೇತುವೆಗೆ ಮಹಾನ್ ದೇಶಭಕ್ತನ ಹೆಸರು ಇಟ್ಟಿರುವುದು ಸೂಕ್ತವಾಗಿದೆ ಎಂದು ಹೇಳಿದರು.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸರಕಾರದಿಂದ 7,300 ಕೋಟಿ ಒದಗಿಸಲಾಗಿದೆ, ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ 400 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ವೀರ ಸಾವರ್ಕರ್ ಸೇತುವೆ ನಿರ್ಮಾಣವಾಗಿರುವುದು ನಮಗೆಲ್ಲಾ ಸ್ಫೂರ್ತಿ ತರುವಂತದ್ದು ಎಂದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಸ್ವಾತಂತ್ರ್ಯ ವೀರನ ಬಗ್ಗೆ ಮೂರು ಸಾವಿರ ಪುಸ್ತಕಗಳ ಬಿಡುಗಡೆ ಮಾಡುತ್ತಿದ್ದೇವೆ. ಸಾವರ್ಕರ್ ಬಗ್ಗೆ ಬಹಳಷ್ಟು ಮಂದಿ ವಿರೋಧ ಮಾಡಿದ್ದಾರೆ, ಬಹುಶಃ ವಿರೋಧ ಮಾಡಿದವರಿಗೆ ಸಾವರ್ಕರ್ ಇತಿಹಾಸದ ಅರಿವಿಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಬೈರತಿ ಬಸವರಾಜ್, ಸಿ.ಟಿ ರವಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.
ಸಾವರ್ಕರ್ ಮೇಲ್ಸೇತುವೆಗೆ ವಿರೋಧ: ಬಂಧನ
ಸಾವರ್ಕರ್ ಮೇಲ್ಸೇತುವೆ ಉದ್ಘಾಟನೆಗೂ ಮುನ್ನ ಕನ್ನಡ ಪರ ಸಂಘಟನೆಯ ಹೋರಾಟಗಾರರನ್ನು ಬಂಧಿಸಿರುವ ಸರಕಾರದ ನಡೆಯ ವಿರುದ್ಧ ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲಹಂಕ ಮೇಲ್ಸೇತುವೆ ವಿಚಾರವಾಗಿ ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ಅವರನ್ನು ಅಮೃತಹಳ್ಳಿ ಪೊಲಿಸ್ ಠಾಣೆಯವರು ಬಂಧಿಸಿದ್ದಾರೆ. ಒಬ್ಬ ಹೋರಾಟಗಾರನನ್ನು ಬಂಧಿಸಿ ಯಲಹಂಕ ಮೇಲ್ಸೇತುವೆ ಉದ್ಘಾಟನಾ ಮಾಡುವ ಪರಿಸ್ಥಿತಿ ನಮ್ಮ ರಾಜ್ಯ ಸರಕಾರಕ್ಕೆ ಬಂದಿದೆ ಎಂದು ಮಂಜು ಗಣಪತಿ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ತನ್ನನ್ನು ಬಂಧಿಸಿರುವುದಾಗಿ ಸ್ವತಃ ಭೈರಪ್ಪ ಹರೀಶ್ ಕುಮಾರ್ ಫೇಸ್ಬುಕ್ ಮೂಲಕ ಹೇಳಿಕೊಂಡಿದ್ದಾರೆ.