ಸಿಬ್ಬಂದಿಗಳಿಗೆ ಚಿಕಿತ್ಸೆ: ನಿಮ್ಹಾನ್ಸ್ ಜತೆ ಕೈ ಜೋಡಿಸಿದ ಬಿಎಂಟಿಸಿ
ಬೆಂಗಳೂರು, ಅ.2: ಸಿಬ್ಬಂದಿಗಳಿಗೆ ಚಿಕಿತ್ಸೆ ಕೊಡಿಸುವ ಹಿನ್ನೆಲೆ ಬಿಎಂಟಿಸಿ ಅಧ್ಯಕ್ಷೆ ನಂದೀಶಾ ರೆಡ್ಡಿ ಮತ್ತು ನಿಮ್ಹಾನ್ಸ್ ನಿರ್ದೇಶಕ ಗಂಗಾಧರ್ ಗುರುವಾರ ಒಡಂಬಡಿಕೆಯ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದರು.
ನರರೋಗ, ಮಾನಸಿಕ ಒತ್ತಡಕ್ಕೊಳಗಾದ ಸಿಬ್ಬಂದಿಗಳಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಜೊತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೈಜೋಡಿಸಿದ್ದು, ಮೂರು ವರ್ಷಗಳಿಗೆ ಒಪ್ಪಂದವಾಗಿದ್ದು, ಅಗತ್ಯವೆನಿಸಿದರೆ ಈ ಅವಧಿಯನ್ನು ವಿಸ್ತರಿಸಬಹುದು, ನವೀಕರಣಗೊಳಿಸಬಹುದಾಗಿದೆ.
ಈ ಕುರಿತು ಬಿಎಂಟಿಸಿ ನಿರ್ದೇಶಕ ಡಾ. ಅರುಣ್ ಮಾತನಾಡಿ, ಬಿಎಂಟಿಸಿ ಸಿಬ್ಬಂದಿಗಳ ಮಾನಸಿಕ ಸಮಸ್ಯೆ, ಮದ್ಯ ವ್ಯಸನ ಸೇರಿದಂತೆ ಸಿಬ್ಬಂದಿಗಳ ಆರೋಗ್ಯದ ಆರೈಕೆ ಕುರಿತು ನಿಮ್ಹಾನ್ಸ್ ಅಧ್ಯಯನ ನಡೆಸಲಿದೆ ಎಂದಿದ್ದಾರೆ.
ಸಾರಿಗೆ ಸಿಬ್ಬಂದಿಗಳ ಆರೈಕೆ, ರೋಗಿಗಳಿಗೆ ಚಿಕಿತ್ಸೆ ನೀಡುವುದು, ವೈದ್ಯಕೀಯ ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳು ಒಪ್ಪಂದದಲ್ಲಿವೆ. ಒಪ್ಪಂದಗಳ ಕುರಿತು ಇನ್ನೂ ಸಾಕಷ್ಟು ಕೆಲಸಗಳಿವೆ ಎಂದು ಹೇಳಿದ್ದಾರೆ.
ಚಿಕಿತ್ಸೆಯಲ್ಲಿ ಸಬ್ಸಿಡಿ ನೀಡುವ ಪರಿಶೀಲನೆಗಳು ನಡೆಯುತ್ತಿವೆ. ಸಿಬ್ಬಂದಿಗಳಿಗೆ ಆದ್ಯತೆಯ ಸೇವೆಗಳನ್ನು ಒದಗಿಸಲಾಗುತ್ತದೆ. ನಿಮ್ಹಾನ್ಸ್ ನಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ಪ್ರಯಾಣಕ್ಕೆ ಸಬ್ಸಿಡಿ ನೀಡುವ ಕುರಿತಂತೆಯೂ ಪರಿಶೀಲನೆಗಳು ನಡೆಯುತ್ತವೆ ಎಂದು ಅವರು ತಿಳಿಸಿದ್ದಾರೆ.