ಪ್ರತಿಷ್ಠಿತ ಕಂಪೆನಿಯ ಹೆಸರಿನಲ್ಲಿ ವಂಚನೆ: ಆರೋಪಿ ಬಂಧನ
ಬೆಂಗಳೂರು, ಅ.12: ಪ್ರತಿಷ್ಠಿತ ಕಂಪೆನಿಯ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಸಿಸಿಬಿ ಸೈಬರ್ ವಿಭಾಗದ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರ್ ಟಿನಗರ ನಿವಾಸಿ ದಾವೂದ್ ಪಾಶಾ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಾಜಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುವ ಪಿ.ಸಿ.ಶರ್ಮಾ ಎಂಬವರು ಆನ್ಲೈನ್ ಮೂಲಕ ತಮ್ಮ ಕಂಪೆನಿಯ ಕೆಲ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ ಮತ್ತೊಂದು ವೆಬ್ಸೈಟ್ನೊಂದಿಗೆ ಜನವರಿಯಲ್ಲಿ ಕಡಿಮೆ ದರದಲ್ಲಿ ವಸ್ತುಗಳನ್ನು ನೀಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಒಪ್ಪಂದದಂತೆ 8 ಲಕ್ಷದ 33 ಸಾವಿರದ 835 ರೂ. ವ್ಯವಹಾರ ನಡೆದಿದ್ದು, ತದನಂತರ, 4 ಲಕ್ಷದ 16 ಸಾವಿರದ 917 ರೂ. ಕಳುಹಿಸಲಾಗಿತ್ತು. ಆದರೆ, ಆರೋಪಿ ದಾವೂದ್ ಪಾಶಾ, ಹಣ ಬಂದ ಕೂಡಲೇ ಯಾವುದೇ ಪ್ರತಿಕ್ರಿಯೆ ನೀಡದೆ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಶರ್ಮಾ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.