ಚೂರಿ ಇರಿತ ಪ್ರಕರಣ: ಮೃತರ ಸಂಖ್ಯೆ ಎರಡಕ್ಕೆ ಏರಿಕೆ
ಬೆಂಗಳೂರು, ಅ.19: ಇಲ್ಲಿನ ಕಾಟನ್ಪೇಟೆಯಲ್ಲಿ ನಡೆದ ಸರಣಿ ಚೂರಿ ಇರಿತ ಪ್ರಕರಣದಲ್ಲಿ ಚೂರಿ ಇರಿತಕ್ಕೊಳಗಾಗಿದ್ದ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.
ನಗರದ ಬಾಳೆಮಂಡಿಯಲ್ಲಿ ಕೂಲಿ ಕಾರ್ಮಿಕ ರಾಜೇಶ್(28) ಎಂಬುವರು ಮೃತಪಟ್ಟಿರುವುದಾಗಿ ಪೊಲೀಸರು ಗುರುತಿಸಿದ್ದಾರೆ.
ರವಿವಾರ ಗಣೇಶ್ ಎಂಬಾತ ಕಾಟನ್ಪೇಟೆ ವ್ಯಾಪ್ತಿಯಲ್ಲಿ ಏಕಾಏಕಿ ಆರು ಮಂದಿಗೆ ಚೂರಿ ಇರಿದಿದ್ದ. ಈ ಪೈಕಿ ರಾಜೇಶ್ ಅವರಿಗೆ ಗಣೇಶ್ ಚೂರಿವಿನಿಂದ ಇರಿದಿದ್ದ ಪರಿಣಾಮ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯವಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.
ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ವೇಳೆ ಆರೋಪಿ ಗಣೇಶ್ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣುವ ಕಾರಣ, ಚಿಕಿತ್ಸೆಗೆ ಒಳಪಡಿಸಿ ಆತನ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇನ್ನು, ಚೂರಿ ಇರಿತಕ್ಕೊಳಗಾದ ಉಳಿದ ನಾಲ್ವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story