ಸರಣಿ ಚಾಕು ಇರಿತ ಪ್ರಕರಣ: ಉದ್ದೇಶಪೂರ್ವಕ ವಿಕೃತಿ ಎಂದ ಪೊಲೀಸರು
ಬೆಂಗಳೂರು, ಅ.20: ಇಲ್ಲಿನ ಕಾಟನ್ಪೇಟೆಯಲ್ಲಿ ಸರಣಿ ಚಾಕು ಇರಿತ ಪ್ರಕರಣ ಸಂಬಂಧ ಆರೋಪಿ ಉದ್ದೇಶಪೂರ್ವಕವಾಗಿ ವಿಕೃತಿ ಮೆರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಗಣೇಶ್, ಮನೆಯಿಂದ ಹೊರ ಬಂದು 8 ಜನರಿಗೆ ಚಾಕುವಿನಿಂದ ಇರಿದು ಇಬ್ಬರ ಸಾವಿಗೂ ಕಾರಣವಾಗಿದ್ದ. ಈ ಘಟನೆಯ ವೇಳೆ ಆರೋಪಿಯನ್ನು ತಡೆಯಲು ಯತ್ನಿಸಿ ವಿಫಲವಾದ ಮಳಿಗೆ ಮಾಲಕರೊಬ್ಬರು ಕಾಟನ್ಪೇಟೆ ಠಾಣಾ ಪೊಲೀಸರಿಗೆ ಈ ವಿಚಾರ ಮುಟ್ಟಿಸಿದ್ದರು ಎನ್ನಲಾಗಿದೆ.
ಕೂಡಲೇ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದ ಠಾಣಾ ಸಿಬ್ಬಂದಿ ಆರೋಪಿಯನ್ನು ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ನಡೆದ ವಿಚಾರಣೆಯ ವೇಳೆ, ಆರೋಪಿಯ ತಾಯಿ, ತನ್ನ ಮಗ ನಿಮ್ಹಾನ್ಸ್ನಲ್ಲಿ ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆದಿದ್ದ ಎಂದು ಪೊಲೀಸರಿಗೆ ತಿಳಿಸಿದ್ದರು.
ಆದರೆ, ಚಿಕಿತ್ಸೆ ಪಡೆದ ಗಣೇಶ್, ಬಳಿಕ ಸರಿಯಾಗಿದ್ದ ಎಂಬ ಅಂಶ ಪೊಲೀಸರ ತನಿಖೆ ವೇಳೆ ದೃಢಪಟ್ಟಿದೆ. ಅಲ್ಲದೆ, ಆರೋಪಿಯೂ ನಾಲ್ಕೈದು ವರ್ಷದಿಂದ ಪತ್ನಿಯಿಂದ ದೂರವಿದ್ದು, ತಾಯಿ ಜೊತೆ ಅಂಜನಪ್ಪ ಗಾರ್ಡನ್ನಲ್ಲಿ ವಾಸವಾಗಿದ್ದ ಎನ್ನಲಾಗಿದೆ.