ಲಾಕ್ಡೌನ್ ಬಳಿಕ ರಾಜಧಾನಿಯಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಏರಿಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ನ.9: ರಾಜಧಾನಿಯಲ್ಲಿ ಲಾಕ್ಡೌನ್ ನಂತರ ಉಂಟಾದಂತ ವಾಹನ ಸಮಸ್ಯೆ ಹಾಗೂ ಕೊರೋನ ನಂತರ ಉಂಟಾದ ಭೀತಿಯಿಂದಾಗಿ ಹೃದಯಾಘಾತದ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಎಪ್ರಿಲ್ನಿಂದ ಸೆಪ್ಟಂಬರ್ ಅವಧಿಯವರೆಗೆ ಶೇ.4ರಷ್ಟು ಜನರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ಲಾಕ್ಡೌನ್ ವೇಳೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಲಾಗದೆ, ಹಾಗೂ ಕೊರೋನ ಸೋಂಕಿಗೆ ಹೆದರಿ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಂತ ಶೇ.4ರಷ್ಟು ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ನಗರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗಿರುವುದಾಗಿ ತಿಳಿಸಿದ್ದಾರೆ.
ಎಪ್ರಿಲ್ನಿಂದ ಸೆಪ್ಟಂಬರ್ ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ಕೋವಿಡ್ ಕೆಲಸ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇರೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗದೇ ಇರುವುದು ಸಾವಿಗೆ ಕಾರಣವಾಗಿದೆ. ಅಲ್ಲದೇ ಗಂಭೀರ ಸಮಸ್ಯೆ ಇರುವ ರೋಗಿಗಳಿಗೆ ಕೊರೋನ ಸೋಂಕು ತಗಲಿದ್ದರಿಂದಾಗಿ ಸೋಂಕಿತರ ರಕ್ತನಾಳಗಳು ಬ್ಲಾಕ್ ಆಗಿಯೂ ಸಾವನ್ನಪ್ಪಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಶೇ.4ರಷ್ಟು ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ನಗರದಲ್ಲಿ ಏರಿಕೆಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ.