ಬೆಂಗಳೂರು ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ರಾಜ್ ಸಿಸಿಬಿ ಕಸ್ಟಡಿಗೆ
ಬೆಂಗಳೂರು, ನ.17: ಡಿಜೆ-ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಿಬಿಎಂಪಿ ಮಾಜಿ ಮೇಯರ್ ಸಂಪತ್ರಾಜ್ ಅವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.
ಇಲ್ಲಿನ ಪುಲಿಕೇಶಿ ನಗರದ ಸಂಪತ್ರಾಜ್ ನಿವಾಸದಲ್ಲಿಯೇ ಸೋಮವಾರ ತಡರಾತ್ರಿ ಬಂಧಿಸಿದ ಸಿಸಿಬಿ ತನಿಖಾಧಿಕಾರಿಗಳು, ಮಂಗಳವಾರ ನಗರದ 67ನೆ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ತದನಂತರ, ಸಿಸಿಬಿ ಹಾಗೂ ಆರೋಪಿ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು, ನ.19ರವರೆಗೂ ಸಂಪತ್ರಾಜ್ ಅವರನ್ನು ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದರು.
ವಿಚಾರಣೆ?: ತನಿಖೆ ಚುರುಕುಗೊಳಿಸಿರುವ ಸಿಸಿಬಿ, ಸಂಪತ್ರಾಜ್ ಅವರನ್ನು ಚಾಮರಾಜಪೇಟೆಯ ಸಿಸಿಬಿ ಕೇಂದ್ರ ಕಚೇರಿಗೆ ಕರೆತಂದು, ವಿಚಾರಣೆ ನಡೆಸಿ, ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಂಡರು ಎಂದು ಮೂಲಗಳು ತಿಳಿಸಿವೆ.
ಪರಾರಿಯಾಗಿದ್ದ ಮಾಜಿ ಮೇಯರ್: ಶಾಸಕ ಅಖಂಡ ಶ್ರೀನಿವಾಸ್ಮೂರ್ತಿ ಅವರ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದ ಪ್ರಕರಣದ ಆರೋಪಿ ಆಗಿರುವ ಮಾಜಿ ಮೇಯರ್ ಆರ್.ಸಂಪತ್ರಾಜ್ ಕೊರೋನ ಸೋಂಕು ತಗಲಿರುವುದಾಗಿ ಹೇಳಿ ನಗರದ ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಏಕಾಏಕಿ ಬಿಡುಗಡೆ ಆಗಿ ಪರಾರಿಯಾಗಿದ್ದರು. ಅವರಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಇದೇ ಮೊದಲು
ನಗರದ ಪ್ರಥಮ ಪ್ರಜೆಯೊಬ್ಬರು ಕ್ರಿಮಿನಲ್ ಆರೋಪದಲ್ಲಿ ಬಂಧನಕ್ಕೊಳಗಾಗಿರುವುದು ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲು ಎಂದು ಮೂಲಗಳು ತಿಳಿಸಿವೆ.
ಟೌನ್ ಮುನ್ಸಿಪಲ್ ಆಗಿದ್ದ ಬೆಂಗಳೂರು ನಂತರ ನಗರಸಭೆ, ಪಾಲಿಕೆ, ಬಿಎಂಪಿ ಹಾಗೂ ಬಿಬಿಎಂಪಿ ಆಗಿ ಪುನಾರಚನೆಗೊಂಡಿದ್ದು, ಇದುವರೆಗೂ 53 ಮಂದಿ ಬೆಂಗಳೂರಿನ ಪ್ರಥಮ ಪ್ರಜೆಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಇಂತಹ ಉನ್ನತ ಹಿನ್ನೆಲೆ ಹೊಂದಿರುವ ಮಾಜಿ ಮೇಯರ್ ಸಂಪತ್ರಾಜ್, ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ಬಂಧನಕ್ಕೊಳಗಾಗುವ ಮೂಲಕ ಬಿಬಿಎಂಪಿ ಖ್ಯಾತಿಗೆ ಕಪ್ಪು ಮಸಿ ಬಳಿದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.
ಏಕೆ ಓಡಿ ಹೋಗಬೇಕಿತ್ತು?
ಮಾಜಿ ಮೇಯರ್ ತಪ್ಪು ಮಾಡಿಲ್ಲ ಎಂದರೆ ಏಕೆ ಓಡಿ ಹೋಗಬೇಕಿತ್ತು? ನೇರವಾಗಿ ಸಿಸಿಬಿಗೆ ಬಂದು ಉತ್ತರ ಕೊಡಬಹುದಿತ್ತು. ಆಸ್ಪತ್ರೆಯಿಂದ ಏಕೆ ಓಡಿಹೋಗಬೇಕಿತ್ತು? ತಪ್ಪು ಮಾಡಿಲ್ಲವಾದರೆ ವಾಸ್ತವದ ವಿಚಾರವನ್ನೇ ಹೇಳಬಹುದಾಗಿತ್ತು. ಆತ ತಪ್ಪು ಮಾಡಿರುವ ಕಾರಣದಿಂದಲೇ ಓಡಿಹೋಗಿದ್ದು. ಆತನೇ ತಪ್ಪಿತಸ್ಥ ಎಂದು ಈಗಾಗಲೇ ಬಯಲಾಗಿದೆ.
-ಅಖಂಡ ಶ್ರೀನಿವಾಸಮೂರ್ತಿ, ಕಾಂಗ್ರೆಸ್ ಶಾಸಕ
ಗಲಭೆಗೆ ಸ್ಪಷ್ಟಚಿತ್ರಣ ಸಿಗಲಿದೆ
ಮಾಜಿ ಮೇಯರ್ ಸಂಪತ್ರಾಜ್ ವಿಚಾರಣೆಯಲ್ಲಿ ಹೊರಬರುವ ಮಾಹಿತಿಗಳಿಂದ ಗಲಭೆಗೆ ಕಾರಣ ಯಾರು ಎಂಬುದು ಸ್ಪಷ್ಟಚಿತ್ರಣ ಸಿಗಲಿದೆ. ಸಂಪತ್ರಾಜ್ ಕೊರೋನ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ತಲೆಮರೆಸಿಕೊಂಡಿದ್ದರು. ಸೋಮವಾರ ತಡರಾತ್ರಿ ಅವರನ್ನು ಬಂಧಿಸಲಾಗಿದೆ. ಅದಾದ ಬಳಿಕ ಹೆಚ್ಚಿನ ತನಿಖೆ ನಡೆಯಲಿದೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ