ನೂರು ಕೆಜಿ ಕೇಕ್ ಕತ್ತರಿಸಿ ಹುಟ್ಟಹಬ್ಬ ಆಚರಿಸಿಕೊಂಡ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು, ಜ.22: ಜಾತ್ಯತೀತ ಜನತಾ ದಳ (ಜೆಡಿಎಸ್) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದು 100 ಕೆಜಿ ತೂಕದ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.
ಇಲ್ಲಿನ ಜೆ.ಪಿ. ನಗರ ನಿವಾಸದಲ್ಲಿ ಅಭಿಮಾನಿಗಳು ನಿಖಿಲ್ ರಿಂದ 100 ಕೆ.ಜಿ. ತೂಕದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ನಿಖಿಲ್, ಕೊರೋನ ಸಂಕಷ್ಟ ಕಾಲದಲ್ಲಿ ಹುಟ್ಟುಹಬ್ಬ ಆಚರಣೆ ಬೇಡ ಎಂದುಕೊಂಡಿದ್ದೆ. ಆದರೆ, ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಹುಟ್ಟು ಹಬ್ಬ ಆಚರಣೆಗೆ ಇಲ್ಲಿ ಬಂದಿದ್ದೀರಿ. ನೀವೆಲ್ಲಾ ಸುರಕ್ಷಿತವಾಗಿ ಮನೆ ತಲುಪಬೇಕು, ಆಗಲೇ ನನಗೆ ನೆಮ್ಮದಿ. ಅದಕ್ಕಾಗಿ ಹುಟ್ಟುಹಬ್ಬ ಆಚರಿಸಿಕೊಂಡೆ. ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಯುವಕರು ಬಂದಿದ್ದಾರೆ, ಎಲ್ಲರಿಗೂ ಧನ್ಯವಾದಗಳು. ಜೆಡಿಎಸ್ ಅಂದರೆ ರೈತರ ಪಕ್ಷ, ಮುಂದಿನ ದಿನಗಳಲ್ಲಿ ಜೆಡಿಎಸ್ ಅಂದರೆ ಯುವಕರ ಪಕ್ಷವೂ ಆಗಲಿದೆ. ನಾವೆಲ್ಲಾ ಸಮಾಜದ ಏಳಿಗೆಗಾಗಿ ಜೊತೆಯಾಗಿ ದುಡಿಯೋಣ ಎಂದು ಕರೆ ನೀಡಿದರು.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿಖಿಲ್ ಸೈನ್ಯ ಸಮಿತಿಯು ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಆಯೋಜಸಿದೆ.