‘ಏರೋ ಇಂಡಿಯಾ’ದಲ್ಲಿ ಆಧುನಿಕ ತಂತ್ರಜ್ಞಾನದ ಅನಾವರಣ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಬೆಂಗಳೂರು, ಫೆ.2: ಉದ್ಯಾನನಗರಿ ಬೆಂಗಳೂರಿನಲ್ಲಿ ಫೆ.3 ರಿಂದ ಆರಂಭಗೊಳ್ಳಲಿರುವ 13ನೇ ಆವೃತ್ತಿಯ ಏರೋ ಇಂಡಿಯಾ-2021 ವೈಮಾನಿಕ ಪ್ರದರ್ಶನವು ಆಧುನಿಕ ತಂತ್ರಜ್ಞಾನದ ಅನಾವರಣಕ್ಕೆ ವೇದಿಕೆಯಾಗಲಿದ್ದು, ಇದು ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತ ಯೋಜನೆಗೆ ಮತ್ತಷ್ಟು ಪುಷ್ಠಿ ನೀಡಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮಂಗಳವಾರ ನಗರದ ಖಾಸಗಿ ಹೊಟೇಲ್ನಲ್ಲಿ ಏರೋ ಇಂಡಿಯಾ 2021ರ ಪೂರ್ವಭಾವಿಯಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ಜಗತ್ತು ಕೋವಿಡ್ ಮಹಾಮಾರಿಯಿಂದ ತತ್ತರಿಸಿದೆ. ಇಂತಹ ಸವಾಲಿನ ಸಂದರ್ಭದಲ್ಲಿಯೂ ಅಂತರ್ರಾಷ್ಟ್ರೀಯ ಮಟ್ಟದ ಅತ್ಯಂತ ದೊಡ್ಡ ವೈಮಾನಿಕ ಪ್ರದರ್ಶನ ಆಯೋಜನೆಗೆ ಆತ್ಮ ನಿರ್ಭರ ಭಾರತ ಯೋಜನೆ ಸಹಕಾರಿಯಾಗಿದೆ ಎಂದರು.
ಬೆಂಗಳೂರಿನಲ್ಲಿ ಈ ಬಾರಿಯೂ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆಯೋಜನೆಗೆ ಅಗತ್ಯ ನೆರವನ್ನು ನೀಡಿರುವ ರಾಜ್ಯ ಸರಕಾರದ ನೇತೃತ್ವ ವಹಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ವಿಚಾರದಲ್ಲಿ ಅವರು ಕೈಗೊಂಡ ಆಸಕ್ತಿ ಹಾಗೂ ಸರಕಾರದ ಪಾಲುದಾರಿಕೆ ಶ್ಲಾಘನೀಯ ಎಂದು ಅವರು ಹೇಳಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇಲ್ಲಿ ನಡೆದಿರುವ ಆವಿಷ್ಕಾರಗಳು, ಸಂಶೋಧನೆಗಳು ಹಲವು ಪ್ರಥಮಗಳಿಗೆ ಮುನ್ನಡಿ ಬರೆದಿದೆ. ಈ ಕೋವಿಡ್ ಸಾಂಕ್ರಮಿಕದ ಸಂದರ್ಭದಲ್ಲಿಯೂ ನಾವು ಎದೆಗುಂದದೆ ಆಯೋಜಿಸಿರುವ ಏರೋ ಇಂಡಿಯಾ ಕೇವಲ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಭಾರತವನ್ನು ವಿಶ್ವದಲ್ಲೆ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಹಲವಾರು ದೊಡ್ಡಮಟ್ಟದ ಕಾರ್ಯಕ್ರಮಗಳು ಮುನ್ನಲೆಗೆ ಬರಲಿವೆ. ಮುಂದಿನ 3-4 ವರ್ಷಗಳಲ್ಲಿ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ 1.75 ಲಕ್ಷ ಕೋಟಿ ರೂ.ಗಳ ಗುರಿ ಸಾಧಿಸುತ್ತೇವೆಂಬ ಭರವಸೆ ನನಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಅಂತರ್ರಾಷ್ಟ್ರೀಯ ಮಟ್ಟದ ಈ ವೈಮಾನಿಕ ಪ್ರದರ್ಶನವು ಮತ್ತೊಮ್ಮೆ ನಮ್ಮ ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವುದಕ್ಕೆ ಹೆಮ್ಮೆ ಆಗುತ್ತಿದೆ. ಕೊರೋನ ಸಾಂಕ್ರಮಿಕದ ಸಂದರ್ಭದಲ್ಲಿ ಈ ವೈಮಾನಿಕ ಪ್ರದರ್ಶನವನ್ನು ಆಯೋಜಿಸುವ ಮೂಲಕ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರಕಾರ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದರು.
ದೇಶದ ರಕ್ಷಣಾ ವಲಯಕ್ಕೆ ನಮ್ಮ ರಾಜ್ಯದ ಮೈಸೂರ ಸಂಸ್ಥಾನ ಆರಂಭಿಸಿದ ಎಚ್ಎಎಲ್ ಸಂಸ್ಥೆಯ ಪಾತ್ರ ಮಹತ್ವವಾದದ್ದು. ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಪಡೆಯಲ್ಲೂ ಎಚ್ಎಎಲ್ ತನ್ನದೆ ಆದ ಕೊಡುಗೆ ನೀಡಿದೆ. ಕೇಂದ್ರ ಸರಕಾರವು ತೇಜಸ್ ಲಘು ಯುದ್ಧ ವಿಮಾನಗಳ ನಿರ್ಮಾಣ ಘಟಕಕ್ಕಾಗಿ 45 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ಸಂತಸದ ವಿಷಯ. ಈ ಲಘು ಯುದ್ಧ ವಿಮಾನಗಳ ನಿರ್ಮಾಣದಿಂದ ನೇರವಾಗಿ 5 ಸಾವಿರ ಜನರಿಗೆ ಹಾಗು ಪರೋಕ್ಷವಾಗಿ 25 ಸಾವಿರ ಜನರಿಗೆ ಉದ್ಯೋಗ ಅವಕಾಶಗಳು ಸಿಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.