ಫೆ.22ರಿಂದ 6ನೇ ತರಗತಿಯಿಂದ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭ: ಸಚಿವ ಸುರೇಶ್ ಕುಮಾರ್
ಬೆಂಗಳೂರು, ಫೆ.16: ಬೆಂಗಳೂರು ನಗರ, ಕೇರಳ ಗಡಿ ಭಾಗಗಳನ್ನು ಹೊರತುಪಡಿಸಿ ಫೆ.22ರಿಂದ ರಾಜ್ಯಾದ್ಯಂತ 6, 7 ಹಾಗೂ 8ನೇ ತರಗತಿಗಳನ್ನು ಪೂರ್ಣಾವಧಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯದಲ್ಲಿ ಒಂದನೇ ತರಗತಿಯಿಂದಲೇ ಪೂರ್ಣಾವಧಿ ಶಾಲೆಗಳನ್ನು ಆರಂಭಿಸಬೇಕೆಂದು ಪೋಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ಶಿಕ್ಷಣ ತಜ್ಞರ ಒತ್ತಾಯವಾಗಿದೆ. ಈ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಜತೆಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಸಮಿತಿಯ ಸೂಚನೆಯಂತೆ 6ನೇ ತರಗತಿಯಿಂದ ಪೂರ್ಣಾವಧಿ ಶಾಲೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ 9ನೇ, 10, 11 ಹಾಗೂ 12ನೇ ತರಗತಿಗೆ ಪೂರ್ಣಾವಧಿ ಶಾಲೆ ಆರಂಭವಾಗಿದ್ದು, ಶೇ.70ಕ್ಕಿಂತ ಹೆಚ್ಚು ಹಾಜರಾತಿಯಿದೆ. ಪೂರ್ಣಾವಧಿ ಶಾಲೆ ಆರಂಭಕ್ಕೆ ವಿದ್ಯಾರ್ಥಿ ಹಾಗೂ ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ 6ನೇ ತರಗತಿಯಿಂದ ಪೂರ್ಣಾವಧಿ ಶಾಲೆ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಶಾಲೆಗಳು ಆರಂಭವಾಗದಿರುವುದರಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ಕುರಿತು ಇತ್ತೀಚಿಗೆ ಅಝೀಂ ಪ್ರೇಮ್ಜಿ ವಿಶ್ವವಿದ್ಯಾಲಯ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ಇದರಲ್ಲಿ ಗಣಿತ ಹಾಗೂ ಭಾಷೆ ವಿಷಯದ ಕಲಿಕಾ ಸಾಮರ್ಥ್ಯ ಕುಸಿತವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೀಗಾಗಿ ಹಂತ, ಹಂತವಾಗಿ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಒಂದರಿಂದ 5ನೇ ತರಗತಿವರೆಗೆ ವಿದ್ಯಾಗಮ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ತಾಂತ್ರಿಕ ಸಲಹಾ ಸಮಿತಿಯ ಜೊತೆ ಚರ್ಚಿಸಿ ಪೂರ್ಣಾವಧಿ ಶಾಲೆಗಳನ್ನು ನಡೆಸುವುದರ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
-2021-22 ಸಾಲಿನ ಶೈಕ್ಷಣಿಕ ವರ್ಷವನ್ನು 2021ರ ಜುಲೈ 15ರಿಂದ ಏಕಕಾಲದಲ್ಲಿ ಆರಂಭವಾಗಲಿದೆ.
-ಕೇರಳದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಆಗುತ್ತಿದೆ. ಹೀಗಾಗಿ ಕೇರಳದ ಗಡಿಭಾಗ ಹಾಗೂ ಬೆಂಗಳೂರು ನಗರದಲ್ಲಿ 6 ಮತ್ತು 7ನೇ ತರಗತಿಗೆ ಪೂರ್ಣಾವಧಿ ಶಾಲೆ ಇರುವುದಿಲ್ಲ.
-ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ.
-ರಾಜ್ಯದ ಯಾವುದೇ ಭಾಗದಲ್ಲಿ ಯಾವುದೇ ವಿದ್ಯಾರ್ಥಿಗೆ ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ.
-ವಿದ್ಯಾರ್ಥಿಗಳ ಶಾಲೆ ಹಾಜರಾತಿಗೆ ಪೋಷಕರ ಅನುಮತಿ ಕಡ್ಡಾಯ
ಪೂರ್ಣಾವಧಿ ಶಾಲೆ ಆರಂಭ: ಸ್ವಾಗತ
ಒಂದರಿಂದ 5ನೇ ತರಗತಿಗಳಿಗೆ ವಿದ್ಯಾಗಮ ಹಾಗೂ 6 ರಿಂದ 8ನೇ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಶಾಲೆ ಪ್ರಾರಂಭಿಸುತ್ತಿರುವ ಸರಕಾರದ ನಿರ್ಧಾರವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ವಾಗತಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘವು, ಪೂರ್ಣಾವಧಿ ಶಾಲೆ ಆರಂಭದ ಕುರಿತು ಶಿಕ್ಷಕರ ಸಂಘವು ಹಲವಾರು ಬಾರಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಮನವಿ ಮಾಡಿತ್ತು. ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಸರಕಾರ ತೆಗೆದುಕೊಂಡ ಈ ತೀರ್ಮಾನ ಅತ್ಯಂತ ಸೂಕ್ತವಾಗಿದೆ ಎಂದು ಅಭಿಪ್ರಾಯಿಸಿದೆ.
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಕೂಡ ತಕ್ಷಣ ಪ್ರಾರಂಭಿಸಬೇಕು ಹಾಗೂ 1 ರಿಂದ 5ನೇ ತರಗತಿಗಳಿಗೆ ಪೂರ್ಣ ಪ್ರಮಾಣ ತರಗತಿಗಳನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸುತ್ತೇವೆ. ಹಾಗೂ ಈಗಾಗಲೇ ಸರಕಾರ ಪ್ರೌಢ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಿದ್ದು, ಪ್ರಾಥಮಿಕ ಶಾಲೆಗಳಿಗೂ ಕೂಡ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕೆಂದು ಶಿಕ್ಷಕರ ಸಂಘ ಒತ್ತಾಯಿಸಿದೆ.
ಕೊರೋನ ನಿಯಂತ್ರಣ ಮಾರ್ಗಸೂಚಿ
ಶೈಕ್ಷಣಿಕ ಸಂಸ್ಥೆಗಳ ಹಾಸ್ಟೆಲ್, ವಸತಿ ಶಾಲೆ-ಕಾಲೇಜುಗಳಲ್ಲಿ 5ಕ್ಕಿಂತ ಹೆಚ್ಚು ಕೊರೋನ ಪ್ರಕರಣಗಳು ಪತ್ತೆಯಾದರೆ ಅದನ್ನು ಕಂಟೇನ್ಮೆಂಟ್ ವಲಯವೆಂದು ಘೋಷಿಸಲಾಗುವುದು. ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಗಳಿಗಿಂತ ಹಳೆಯದಲ್ಲದ ಆರ್ಟಿಪಿಸಿಆರ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ