ಯುವ ಸಮುದಾಯದ ಧ್ವನಿ ದಮನಕ್ಕೆ ಸರ್ಕಾರಗಳು ಮುಂದಾಗಿವೆ: ಡಿ.ಕೆ.ಶಿವಕುಮಾರ್ ಆಕ್ರೋಶ
ದಿಶಾ ರವಿ ಬಂಧನಕ್ಕೆ ಖಂಡನೆ
ಬೆಂಗಳೂರು, ಫೆ.16: ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿವೆ. ಯುವಕರ ಧ್ವನಿ ಈ ದೇಶದ ಧ್ವನಿ. ಆದರೆ ಈ ಧ್ವನಿ ದಮನಕ್ಕೆ ಸರ್ಕಾರಗಳು ಮುಂದಾಗಿವೆ. ಯುವಕರು ತಮ್ಮ ಹಕ್ಕು ರಕ್ಷಣೆಗೆ ಹೋರಾಟ ಮಾಡಬೇಕಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದಿಶಾ ರವಿ ಬಂಧನದ ಹಿನ್ನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ದಿಶಾ ರವಿ ಬಂಧನದಿಂದ ಇಡೀ ದೇಶದ ಯುವ ಸಮುದಾಯ ದಿಗ್ಭ್ರಮೆಗೆ ಒಳಗಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಪ್ರಮುಖವಾದುದು. ನಮ್ಮ ಸಂವಿಧಾನ ನಮಗೆ ಈ ಸ್ವಾತಂತ್ರ್ಯ ನೀಡಿದೆ. ಯುವಕರು ತಮ್ಮ ಸ್ವಾತಂತ್ರ್ಯ ವ್ಯಕ್ತಪಡಿಸದಂತೆ ಬಾಯಿ ಮುಚ್ಚಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.
ಕರ್ನಾಟಕದವರಾದ ದಿಶಾ ರವಿ ಬಂಧನವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ನಾನು ಖಂಡಿಸುತ್ತೇನೆ. ಇಡೀ ಯುವ ಸಮುದಾಯಕ್ಕೆ ಇದೊಂದು ಎಚ್ಚರಿಕೆ ಗಂಟೆ. ಎಲ್ಲರ ಅಭಿಪ್ರಾಯ, ಅನಿಸಿಕೆಗಳನ್ನು ಮಟ್ಟ ಹಾಕಲು ಸರ್ಕಾರಗಳು ಪ್ರಯತ್ನಿಸುತ್ತಿವೆ. ಇದರ ವಿರುದ್ಧ ನಾವು ಪ್ರತಿಭಟನೆ ಮಾಡಬೇಕಿರುವುದು ಅನಿವಾರ್ಯ ಎಂದರು.
ವಾಕ್ ಸ್ವಾತಂತ್ರ್ಯ ನಿಮ್ಮ ಹಕ್ಕು. ಭಾರತದಲ್ಲಿ ನಮ್ಮ ದೊಡ್ಡ ಆಸ್ತಿ ಎಂದರೆ ಅದು ನಮ್ಮ ಸ್ವಾತಂತ್ರ್ಯದ ಹಕ್ಕು. ಈ ಹಕ್ಕು ಉಳಿಸಿಕೊಳ್ಳಲು ನಾವು ಹೋರಾಟ ಮಾಡಬೇಕಿದೆ ಎಂದು ಯುವಕರಿಗೆ ಸಂದೇಶ ರವಾನಿಸುತ್ತೇನೆ. ರೈತರ ಹೋರಾಟ, ಸಿಎಎ, ಎನ್.ಆರ್.ಸಿ. ವಿರೋಧದ ಧ್ವನಿ ಮೊಟುಕುಗೊಳಿಸಲಾಯಿತು. ಸರ್ಕಾರಕ್ಕೆ ನಾಯಕರುಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕ ಸಂಘಟನೆಗಳು, ಎನ್.ಜಿ.ಒ. ಮಾಧ್ಯಮಗಳು ಸೇರಿದಂತೆ ಯಾರು ಬೇಕಾದರೂ ಮಾರ್ಗದರ್ಶನ ನೀಡಬಹುದು. ಇವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ಎಲ್ಲ ಯುವಕರು ಎದ್ದೇಳಬೇಕು, ಮಾಧ್ಯಮ ಸ್ನೇಹಿತರು ಕೂಡ ನಿಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ಇದು ನಿಮ್ಮ ಜವಾಬ್ದಾರಿ ಎಂದು ಮನವಿ ಮಾಡುತ್ತೇನೆ ಎಂದರು.