ನಿವೃತ್ತ ಉಪ ತಹಶೀಲ್ದಾರ್ ಕೊಲೆ ಪ್ರಕರಣ: ಮತ್ತೋರ್ವ ಸೆರೆ
ಬೆಂಗಳೂರು, ಫೆ.17: ಬಾಡಿಗೆ ವಿಚಾರವಾಗಿ ನಿವೃತ್ತ ಉಪ ತಹಶೀಲ್ದಾರ್ ಕೆ.ರಾಜೇಶ್ವರಿ ಅವರನ್ನು ಕೊಲೆಗೈದಿದ್ದ ಆರೋಪ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ವಿವಿಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಇಬ್ರಾಹಿಂಖಾನ್(45) ಬಂಧಿತ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಡಿಸಿಪಿ ಹರೀಶ್ಪಾಂಡೆ ತಿಳಿಸಿದ್ದಾರೆ.
ಪ್ರಕರಣ ಪ್ರಮುಖ ಆರೋಪಿ ಅಲೀಂ ಪಾಷಾಗೆ ಪರಿಚಿತನಾಗಿದ್ದ ಇಬ್ರಾಹಿಂ ಮೃತ ರಾಜೇಶ್ವರಿ ಶವವನ್ನು ಸಾಗಿಸಲು ಸಹಾಯ ಮಾಡಿದ್ದ. ಬಂಧನಕ್ಕೊಳಗಾದ ಆರೋಪಿಗಳು ನೀಡಿದ ಸುಳಿವಿನ ಆಧಾರದ ಮೇರೆಗೆ ಇಬ್ರಾಹಿಂಗಾಗಿ ಕೆಲ ಸಮಯದಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇತ್ತೀಚೆಗೆ ಆತ ಉತ್ತರಪ್ರದೇಶದಲ್ಲಿ ಸರವಸ್ಸಿ ಜಿಲ್ಲೆಯ ಪಟ್ಟರ್ ಗಂಜ್ನಲ್ಲಿರುವ ಆತನ ಮನೆಯಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಉತ್ತರಪ್ರದೇಶಕ್ಕೆ ತೆರಳಿದ ವಿವಿಪುರ ಪೊಲೀಸರು ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದರು.
Next Story