ಬೆಂಗಳೂರು: ಯುವತಿ ಮೇಲೆ ಡೆಲಿವರಿ ಬಾಯ್ ಹಲ್ಲೆ; ಆರೋಪ
Photo source: instagram.com(hiteshachandranee)
ಬೆಂಗಳೂರು, ಮಾ.10: ಆನ್ಲೈನ್ ಮೂಲಕ ಊಟ ಆರ್ಡರ್ ಮಾಡಿದ ಯುವತಿಯೊಬ್ಬಳಿಗೆ ಡೆಲಿವರಿ ಬಾಯ್ ಹಲ್ಲೆ ಮಾಡಿರುವ ಘಟನೆ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಿತೇಶಾ ಚಂದ್ರಾಣಿ ಎಂಬಾಕೆ ಮೇಲೆ ಹಲ್ಲೆಯಾಗಿದ್ದು, ಡೆಲಿವರಿ ಬಾಯ್ ಕಾಮರಾಜ್ ಎಂಬಾತ ಈ ಕೃತ್ಯವೆಸಗಿದ್ದಾನೆ ಎಂದು ಆರೋಪ ಕೇಳಿಬಂದಿದೆ.
ಘಟನೆ ಕುರಿತು ಹಿತೇಶಾ ಚಂದ್ರಾಣಿ ವಿಡಿಯೊ ಬಿಡುಗಡೆ ಮಾಡಿದ್ದು, ಮಂಗಳವಾರ ಮಧ್ಯಾಹ್ನ ಆನ್ಲೈನ್ ಮೂಲಕ ಊಟ ಖರೀದಿಸಿದ್ದಾರೆ. ಆದರೆ, ನಿಗದಿತ ಸಮಯಕ್ಕೆ ಆಹಾರ ಬಾರದಿದ್ದಾಗ ಯುವತಿ ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ಹೇಳಿಕೊಂಡು, ತಡವಾಗುತ್ತಿರುವ ಕಾರಣ ಊಟ ಬೇಡವೆಂದು ಹೇಳಬಹುದಾ ಎಂದು ಸಿಬ್ಬಂದಿಗೆ ಕೇಳಿದ್ದಾರೆ. ಆಗಷ್ಟೇ ಡೆಲಿವರಿ ಬಾಯ್ ಮನೆಗೆ ಆಗಮಿಸಿದ್ದು, ಆನ್ಲೈನ್ ಕಂಪೆನಿಯೊಂದಿಗೆ ಮಾತನಾಡುತ್ತಿದ್ದೇನೆ. ನನಗೆ ಡೆಲಿವರಿ ವೆಚ್ಚವಿಲ್ಲದೆ ಊಟ ನೀಡಿ. ಇಲ್ಲದಿದ್ದರೆ, ನಿಮ್ಮ ಕಡೆಯವರಿಂದ ಉತ್ತರ ಬರುವವರೆಗೂ ನಿಲ್ಲುವಂತೆ ಸೂಚಿಸಿದ್ದಾರೆ. ಆದರೆ, ಇದರಿಂದ ಸಿಡಿಮಿಡಿಗೊಂಡ ಡೆಲಿವರಿ ಬಾಯ್, ಯುವತಿಯೊಂದಿಗೆ ವಾಗ್ವಾದಕ್ಕಿಳಿದು, ಹಲ್ಲೆ ನಡೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.