ಬೆಂಗಳೂರು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ: ಖಾಸಗಿ ಕಂಪೆನಿಗೆ ವಹಿಸದಂತೆ ಸಿಎಂಗೆ ಮನವಿ
ಬೆಂಗಳೂರು, ಮಾ.11: ಬೆಂಗಳೂರು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದ ಆಯೋಜನೆಯನ್ನು ಹೊರಗುತ್ತಿಗೆಯಾಗಿ ಖಾಸಗಿ ಕಂಪೆನಿಗೆ ವಹಿಸುವುದು ಬೇಡ. ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೀಡಬೇಕೆಂದು ಹಿರಿಯ ಸಿನೆಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಸೇರಿದಂತೆ ಹಲವು ನಿರ್ದೇಶಕರು, ಸಿನೆಮಾ ನಟರು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಚಲನಚಿತ್ರ ಉತ್ಸವದ ಮೂಲಕ ಜಗತ್ತಿನ ವಿವಿಧ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಬೆಂಗಳೂರು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸರಕಾರದ ನೇತೃತ್ವದಲ್ಲಿ ನಡೆದರೆ ನಾಡಿನ ಸಾಂಸ್ಕೃತಿಕತೆಯನ್ನು ಸಾದರ ಪಡಿಸಲು ಉತ್ತಮ ವೇದಿಕೆಯಾಗುತ್ತದೆ. ಆದರೆ, ಅದನ್ನು ಮ್ಯಾನೆಜ್ಮೆಂಟ್ ಕಂಪೆನಿಯೊಂದಕ್ಕೆ ವಹಿಸಿದರೆ, ಕೇವಲ ಒಂದು ಕಾರ್ಯಕ್ರಮವಾಗಿ ಮಾತ್ರ ಉಳಿದು ಬಿಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸುಮಾರು ಆರೇಳು ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಅಂತರ್ರಾಷ್ಟ್ರೀಯ ಸಿನೆಮೋತ್ಸವದ ಸಂಪೂರ್ಣ ನಿರ್ವಹಣೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ವಹಿಸಬೇಕು. ಆ ಮೂಲಕ ಸಿನೆಮೋತ್ಸವವನ್ನು ನಾಡಿನ ಜನತೆ ತಮ್ಮದೇ ಉತ್ಸವವೆಂದು ಭಾವಿಸಲು ಅವಕಾಶ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಅನಗತ್ಯ ವೆಚ್ಚಬೇಡ: ಬೆಂಗಳೂರು ಅಂತರ್ರಾಷ್ಟ್ರೀಯ ಸಿನೆಮೋತ್ಸವದ ಉದ್ಘಾಟನೆ ಹಾಗೂ ಮುಕ್ತಾಯದ ಕಾರ್ಯಕ್ರಮಗಳಿಗೆ ಎರಡರಿಂದ ಮೂರು ಕೋಟಿ ರೂ.ವೆಚ್ಚ ಆಗುತ್ತಿದೆ. ಈ ಸಮಾರಂಭದಿಂದ ಚಲನಚಿತ್ರೋದ್ಯಮಕ್ಕೆ ಯಾವುದೇ ಅನುಕೂಲ ಇಲ್ಲ. ಒಟ್ಟು ಉತ್ಸವಕ್ಕೆ ರಾಜ್ಯ ಸರಕಾರ ನೀಡುವ ಹಣದಲ್ಲಿ ಶೇ.50ರಷ್ಟು ಹಣ ಕೇವಲ ಎರಡು ಗಂಟೆ ನಡೆಯುವ ಉದ್ಘಾಟನೆ, ಮುಕ್ತಾಯ ಸಮಾರಂಭಗಳಿಗೆ ವಿನಿಯೋಗ ಆಗುತ್ತಿದೆ ಎಂದು ಅವರು ವಿಷಾದಿಸಿದ್ದಾರೆ.
ಈ ಅನಗತ್ಯ ವಿಜೃಂಭಣೆಯಿಂದ ಕೂಡಿದ ಉದ್ಘಾಟನೆ ಹಾಗೂ ಮುಕ್ತಾಯ ಕಾರ್ಯಕ್ರಮ ಮತ್ತು ಅದಕ್ಕೆ ಆಗುವ ದುಂದುವೆಚ್ಚವನ್ನು ತಪ್ಪಿಸಬೇಕಾಗಿದೆ. ಅದರ ಬದಲಾಗಿ ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ ಹಾಗೂ ಕಲಬುರಗಿಗಳಲ್ಲಿ ಚಲನಚಿತ್ರೋತ್ಸವ ನಡೆಸುವಂತಾಗಲಿ ಎಂದು ಅವರು ಆಶಿಸಿದ್ದಾರೆ.
ಚಲನ ಚಿತ್ರೋದ್ಯಮದ ಪರವಾಗಿ ಹಿರಿಯ ನಿರ್ದೇಶಕರಾದ ಬಿ.ಸುರೇಶ್, ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ, ಕವಿತಾ ಲಂಕೇಶ್, ಹಿರಿಯ ನಟ ಶಿವರಾಂ, ರಮೇಶ್ಭಟ್ ಸೇರಿದಂತೆ ಹಲವು ಗಣ್ಯರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.