ರಾಜಕೀಯದಲ್ಲಿ ಸ್ವಾರ್ಥ, ಅಸೂಯೆ ಹೆಚ್ಚಾಗುತ್ತಿದೆ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ಬೆಂಗಳೂರು, ಮಾ.21: ರಾಜಕೀಯ ಜೀವನದಲ್ಲಿ ಸ್ವಾರ್ಥ, ದ್ವೇಷ, ಅಸೂಯೆ ಹೆಚ್ಚಾಗುತ್ತಿರುವ ಕಾಲಮಾನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದೇನೆ. ನಮ್ಮ ಸ್ನೇಹಕ್ಕೆ ಜಾತಿ, ಪಕ್ಷ ಯಾವುದೂ ಅಡ್ಡ ಬಂದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ರವಿವಾರ ನಗರದ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನ ಪೂರ್ಣಿಮಾ ಪ್ಯಾಲೇಸ್ನ ದೇವಂಹಾಲ್ನಲ್ಲಿ ಪ್ರತಿಷ್ಠಾನ ಆಯೋಜಿಸಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಸಾರ್ವಜನಿಕ ಜೀವನದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರೇವಣ್ಣ ಅವರ ಜೀವನ ಕುರಿತಾದ ಸಂಗತ ಮತ್ತು ದೃಶ್ಯಯಾನ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಚ್.ಎಂ.ರೇವಣ್ಣ ಅವರು ನಮ್ಮ ಎಲ್ಲ ಕೆಲಸಗಳಿಗೂ ಸಹಕಾರ ನೀಡುತ್ತಿದ್ದಾರೆ. ಕಾಗಿನೆಲೆ ಅಭಿವೃದ್ಧಿಗೆ ಕೊಡುಗೆ ನೀಡಿರುವ ಕುರಿತು ಸ್ಮರಿಸಿಕೊಂಡರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಬ್ರಾಹ್ಮಣ ಯುವತಿಯರು ಇತರರನ್ನು ಮದುವೆ ಮಾಡಿಕೊಳ್ಳಲು ಪೇಜಾವರ ಮಠದ ಶ್ರೀಗಳು ವಿರೋಧ ವ್ಯಕ್ತಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸಂಪ್ರದಾಯದ ಹೆಸರಿನಲ್ಲಿ ಬ್ರಾಹ್ಮಣ ಯುವತಿಯರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರಿಂದಲೇ ಆ ಯುವತಿಯರು ಇತರೆ ಸಮುದಾಯದವರನ್ನು ಮದುವೆಯಾಗಿದ್ದಾರೆಂದು ಹೇಳಿದರು. ವಿಧವೆಯರಿಗೆ ತಲೆ ಬೋಳಿಸುವ ಪದ್ಧತಿ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ಜಾತಿ ಮೀರಿ ಮದುವೆಗಳಾಗುತ್ತಿವೆ ಎಂದು ತಿಳಿಸಿದರು.
ಪೇಜಾವರ ಶ್ರೀಗಳ ಹೇಳಿಕೆಗೆ ಆಕ್ಷೇಪ
‘ಬ್ರಾಹ್ಮಣ ಯುವತಿಯರನ್ನು ಇತರೆ ಸಮುದಾಯದವರು ಮದುವೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಹುಡುಕಲು ಪದವಿ ಬೇಕಿಲ್ಲ. ಸಂಪ್ರದಾಯದ ಹೆಸರಿನಲ್ಲಿ ಬ್ರಾಹ್ಮಣ ಯುವತಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು. ಋತುಮತಿಯಾಗುವ ವೇಳೆ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡುವ ಕೆಟ್ಟ ಪದ್ಧತಿ ಇತ್ತು. ಆಗ ಅಲೆಮಾರಿ ಸಮುದಾಯದವರು ಇಂಥ ಯುವತಿಯರನ್ನು ಮದುವೆ ಮಾಡಿಕೊಂಡಿದ್ದಾರೆ’.
-ಬಿ.ಟಿ.ಲಲಿತಾ ನಾಯಕ್, ಮಾಜಿ ಸಚಿವೆ