ರಾಜ್ಯದ ಶಾಲೆಗಳ ರಜಾ ಅವಧಿ ಪರಿಷ್ಕರಣೆ: ಸುರೇಶ್ ಕುಮಾರ್
ಬೆಂಗಳೂರು, ಮೇ 5: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದ್ದು, ಪ್ರಸಕ್ತ ಸನ್ನಿವೇಶವನ್ನು ಗಮನದಲ್ಲಿರಿಸಿ 2020-21ನೇ ಸಾಲಿನ ರಜಾ ಅವಧಿಯನ್ನು ಪರಿಷ್ಕರಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿರುವ ಬಗ್ಗೆ ಖಚಿತಪಡಿಸಿಧ ಸಚಿವರು, ಪ್ರಾಥಮಿಕ ಶಾಲೆಗಳಿಗೆ ಹಿಂದೆ ತಿಳಿಸಲಾದಂತೆ ಜೂನ್ 14ರವರೆಗೆ ಬೇಸಿಗೆ ರಜೆ, ಪ್ರೌಢಶಾಲೆಗಳಿಗೆ ಎಪ್ರಿಲ್ 27ರಿಂದ ಆರಂಭಗೊಂಡಂತೆ ಮೇ 31ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ ಎಂದಿದ್ದಾರೆ.
ಪ್ರೌಢಶಾಲಾ ಶಿಕ್ಷಕರು ರಜೆ ಅವಧಿಯಲ್ಲಿ ಎಸೆಸೆಲ್ಸಿ ಮಕ್ಕಳ ಪರೀಕ್ಷಾ ಸಿದ್ಧತೆಯ ಬಗ್ಗೆ ಗಮನ ಹರಿಸಬೇಕು. ದೂರವಾಣಿ ಮೂಲಕ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದು, ಅವರ ಕಲಿಕೆಗೆ ಪ್ರೇರೇಪಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಅದೇರೀತಿ ಜೂನ್ 1ರಿಂದ 14ರವರೆಗೆ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಪುನರ್ಮನನ ತರಗತಿಗಳು ನಡೆಯಲಿವೆ. ಜೂ.15ರಿಂದ 8ನೇ ತರಗತಿಯಿಂದ 10ರ ವರೆಗಿನ ತರಗತಿಗಳು ಪ್ರಾರಂಭವಾಗಲಿವೆ ಎಂದು ಹೇಳಿದ್ದಾರೆ.