ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಸತೀಶ್ ರೆಡ್ಡಿ ವಿರುದ್ಧದ ಆರೋಪ ಸುಳ್ಳು: ಸಚಿವ ಆರ್.ಅಶೋಕ್
ಬೆಂಗಳೂರು, ಜೂ. 23: `ಕೋವಿಡ್ ಸೋಂಕಿತರಿಗೆ ಹಾಸಿಗೆ ಬ್ಲಾಕಿಂಗ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ವಿರುದ್ಧದ ಆರೋಪ ಸುಳ್ಳು. ಸತೀಶ್ ರೆಡ್ಡಿ ಹಿಂಬಾಲಕರಾಗಲಿ ಅಥವಾ ಅವರ ಆಪ್ತರಾಗಲಿ ಈ ಪ್ರಕರಣದಲ್ಲಿ ಇಲ್ಲ' ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಈ ಸಂಬಂಧದ ತನಿಖೆಯಿಂದಲೇ ಇದು ಗೊತ್ತಾಗುತ್ತದೆ. ಆದರೆ, ಪದೇ ಪದೇ ಈ ಪ್ರಕರಣದಲ್ಲಿ ಸತೀಶ್ ರೆಡ್ಡಿ ಹೆಸರು ಬರುವುದರಿಂದ ಅವರಿಗೂ ಬೇಸರ ಆಗಿದೆ. ಹಾಗಾಗಿ, ಅವರು ನ್ಯಾಯಾಲಯದ ಮೊರೆ ಹೋಗಿ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದಾರೆ' ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಶಾಸಕ ಸತೀಶ್ ರೆಡ್ಡಿ ಅವರಿಗೆ ದೇವರು ಎಲ್ಲವನ್ನೂ ಕೊಟ್ಟಿದ್ದಾರೆ. 50-60 ಸಾವಿರ ರೂ.ಗಳಿಗೆ ಶಾಸಕರೊಬ್ಬರು ಇಂತಹ ಕೆಲಸ ಕೈಹಾಕುತ್ತಾರೆಂದು ಯಾರೂ ನಂಬಲು ಸಾಧ್ಯವಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಅನಗತ್ಯ ಸುದ್ದಿಗಳು ಬರುತ್ತಿವೆ. ಇದು ಸರಿಯಲ್ಲ. ಯಾವುದೇ ತಪ್ಪು ಮಾಡದ ವ್ಯಕ್ತಿಯ ಮೇಲೆ ಸುಳ್ಳು ಆರೋಪ ಒಳ್ಳೆಯದಲ್ಲ' ಎಂದು ಅಶೋಕ್ ಇದೇ ವೇಳೆ ಆಕ್ಷೇಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, `ಪಕ್ಷದ ವರಿಷ್ಠರು ಕೇಳಿದಾಗ ಮಾಹಿತಿ ಕೊಟ್ಟಿದ್ದೇನೆ. ಯಾರ ಬಗ್ಗೆಯೂ ದೂರು ಕೊಟ್ಟಿಲ್ಲ. ನನಗೆ ಆಗದೆ ಇದ್ದವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆಂದು ಹೇಳಿದ್ದೇನೆ. ಯಾರಿಗೂ ಈ ಬಗ್ಗೆ ಗೊಂದಲ ಬೇಡ. ನಮ್ಮದೇ ಸರಕಾರ ಇದ್ದರೂ ಲೋಪ-ದೋಷಗಳನ್ನು ಸರಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೆ ತಂದಿದ್ದೇನೆ' ಎಂದು ವಿವರಿಸಿದರು.
`ಪ್ರತಿಪಕ್ಷದ ಕೆಲಸವನ್ನು ಆಡಳಿತ ಪಕ್ಷ ಮಾಡಿದಾಗ ಕೆಲವರಿಗೆ ಸಹಿಸಲು ಸಾಧ್ಯವಾಗಿಲ್ಲ. ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ನಾನು ಯಾರ ಕ್ಷಮೆಯನ್ನು ಕೇಳಿಲ್ಲ. ನಾನು ಯಾವ ಸಚಿವರು ಅಥವಾ ಮುಖ್ಯಮಂತ್ರಿ ಅವರ ವಿರುದ್ಧ ಹೇಳಿಕೆ ಕೊಟ್ಟಿಲ್ಲ. ಅದು ತಪ್ಪು ಕಲ್ಪನೆ. ನಾನು ಆ ರೀತಿಯಲ್ಲಿ ಹೇಳಿಲ್ಲ. ಬಿಜೆಪಿ ರಾಷ್ಟ್ರೀಯ ಮುಖಂಡ ಸಂತೋಷ್ ಜಿ ಅವರಿಗೆ ದೂರು ಕೊಟ್ಟಿದ್ದೇನೆ ಎಂಬುದು ಸತ್ಯಕ್ಕೆ ದೂರ' ಎಂದು ವಿವರಣೆ ನೀಡಿದರು.