ವೈರಸ್ ತಡೆಗಟ್ಟಲು ಲಸಿಕೆ ಹಾಕಿಕೊಳ್ಳಿ: ಸಚಿವ ಸುರೇಶ್ ಕುಮಾರ್
ಬೆಂಗಳೂರು, ಜು.11: ಕೋವಿಡ್ ಸೋಂಕಿಗೆ ಗುರಿಯಾಗದಂತೆ ತಡೆಗಟ್ಟಲು ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ರವಿವಾರ ಇಲ್ಲಿನ ರಾಜಾಜಿನಗರದ ಶ್ರೀರಾಮ ಮಂದಿರ ಆಟದ ಮೈದಾನದಲ್ಲಿ ಕೂಲಿ ಕಾರ್ಮಿಕರು ಸೇರಿದಂತೆ ಹಲವರಿಗೆ ದಿನಸಿ ಸಾಮಾಗ್ರಿಗಳ ಕಿಟ್ಗಳನ್ನು ಹಂಚಿದ ಬಳಿಕ ಅವರು ಮಾತನಾಡಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಪ್ಪೆಂಬರ್ ಹೊತ್ತಿಗೆ ಎಲ್ಲರಿಗೂ ಲಸಿಕೆ ಹಾಕಲಾಗುವುದು. ಇನ್ನು, ಅನ್ಲಾಕ್ ಇದೆ ಎಂದು ಮೈಮರೆಯುವುದು ಬೇಡ. ಎಲ್ಲರೂ ತಪ್ಪದೆ, ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಜನರ ಸಹಕಾರದಿಂದ ಕೊರೋನ ವೈರಸ್ ಹರಡದಂತೆ ತಡೆಯಬಹುದು ಎಂದು ನುಡಿದರು.
ಮಕ್ಕಳಿಗೆ ಕೋವಿಡ್ ಲಸಿಕೆ ಕ್ಲಿನಿಕಲ್ ಪರೀಕ್ಷೆ ನಡೆಯುತ್ತಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಮಕ್ಕಳಿಗೆ ಕೋವಿಡ್ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ ಎಂದೂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯೆ ದೀಪಾ ನಾಗೇಶ್, ಮಂಡಲ ಅಧ್ಯಕ್ಷ ರಾಘವೇಂದ್ರರಾವ್ ಸೇರಿದಂತೆ ಪ್ರಮುಖರಿದ್ದರು.