ಪ್ರವಾಹ ನಿಯಂತ್ರಣದಲ್ಲಿ ಸರಕಾರದ ನಿರ್ಲಕ್ಷ್ಯ ಖಂಡನೀಯ: ಎಸ್.ಡಿ.ಪಿ.ಐ
ಬೆಂಗಳೂರು, ಜು.24: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ಪ್ರವಾಹ ಬಂದು ಮನೆ, ತೋಟ, ರಸ್ತೆಗಳಲ್ಲಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಶಾಸಕರು, ಮಂತ್ರಿಗಳು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ನಿರ್ಲಕ್ಷ್ಯ ತೋರಿಸುತ್ತಿರುವುದು ಖಂಡನೀಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ) ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಆರೋಪಿಸಿದ್ದಾರೆ.
ಕೆಲವು ನಗರಗಳಲ್ಲಿ ರಾಜ ಕಾಲುವೆ ಒತ್ತುವರಿ ಮತ್ತು ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ಮಳೆನೀರು ತುಂಬಿದೆ. ಸ್ಥಳೀಯ ಆಡಳಿತ ಚರಂಡಿಗಳ ಹೂಳೆತ್ತುವುದರಲ್ಲಿ ಸದಾ ಭ್ರಷ್ಟಾಚಾರ ಮಾಡುವುದು ರೂಢಿಯಾಗಿದೆ. ಚರಂಡಿಗಳ ಹೂಳೆತ್ತದೆ ನಕಲಿ ಬಿಲ್ಲುಗಳನ್ನು ತಯಾರಿಸಿ ಖಜಾನೆಗಳಿಂದ ಹಣ ಲೂಟಿ ಮಾಡುವುದು ಬೆಳಕಿಗೆ ಬರುತ್ತಿದೆ. ಮಳೆ ನೀರಿನ ಪ್ರವಾಹ ನಿಯಂತ್ರಿಸುವುದರಲ್ಲಿ ರಾಜ್ಯವನ್ನು ಆಡಳಿತ ನಡೆಸಿದ ಮೂರು ಪಕ್ಷಗಳೂ ವಿಫಲವಾಗಿದೆ ಎಂದು ಅವರು ದೂರಿದ್ದಾರೆ.
ಕೂಡಲೇ ರಾಜ್ಯ ಸರಕಾರ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು, ಮತ್ತು ಸೋಮಾರಿತನ ತೋರಿಸಿ ಕರ್ತವ್ಯ ಲೋಪ ಎಸಗಿದ ಎಲ್ಲ, ಸಿಬ್ಬಂದಿ, ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಅಶ್ರಫ್ ಮಾಚಾರ್ ಒತ್ತಾಯಿಸಿದ್ದಾರೆ.