15 ಸಾವಿರ ರೂ. ಲಂಚ ಪಡೆದ ಆರೋಪದಲ್ಲಿ ಬಿಬಿಎಂಪಿ ಎಫ್ ಡಿಎ ಎಸಿಬಿ ಬಲೆಗೆ
ಬೆಂಗಳೂರು, ಅ.5: ಬಿಬಿಎಂಪಿಯ ವಸತಿ ಗೃಹಗಳಿಗೆ ಸರಬರಾಜು ಮಾಡಿರುವ ಪಿಠೋಪಕರಣಗಳ ಬಾಬ್ತು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು 15 ಸಾವಿರ ರೂ. ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆ ಸಹಾಯಕನನ್ನು ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಬಂಧಿಸಿದೆ.
ಬಿಬಿಎಂಪಿ ಕೇಂದ್ರ ಕಚೇರಿಯ ಉಪ ಆಯುಕ್ತರ ಆಡಳಿತ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಚ್. ರಾಜು ಬಂಧಿತ ಆರೋಪಿ ಎಂದು ಎಸಿಬಿ ಹೇಳಿದೆ.
ಶೇಷಾದ್ರಿಪುರಂ ನಿವಾಸಿಯೊಬ್ಬರು ಬೆಂಗಳೂರು ಮಹಾನಗರ ಪಾಲಿಕೆಯ ಕಚೇರಿಗಳಿಗೆ ಮತ್ತು ವಸತಿ ಗೃಹಗಳಿಗೆ ಪಿಠೋಪಕರಣಗಳನ್ನು ಸರಬರಾಜು ಮಾಡುವ ಟೆಂಡರ್ ಅನ್ನು ಗುತ್ತಿಗೆ ಪಡೆದಿದ್ದರು.
2021ರ (ಮೇ) ಸಾಲಿನಲ್ಲಿ ತಾವರೆಕೆರೆ ಮುಖ್ಯರಸ್ತೆಯ ಪಾಲಿಕೆ ವಸತಿ ಗೃಹಗಳಿಗೆ ಸರಬರಾಜು ಮಾಡಿರುವ ಪಿಠೋಪಕರಣದ ಬಾಕಿ ಉಳಿದಿರುವ ಹಣ ಬಿಡುಗಡೆಗೆ ಕೋರಿದ್ದರು. ಈ ಬಿಲ್ ಅನುಮೋದಿಸಲು ಪಾಲಿಕೆ ಕೇಂದ್ರ ಕಚೇರಿಯ ಉಪ ಆಯುಕ್ತರ ಆಡಳಿತ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಚ್. ರಾಜು 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಗುತ್ತಿಗೆದಾರ ಎಸಿಬಿ ಅಧಿಕಾರಿಗಳಿಗೆ ರಾಜು ವಿರುದ್ಧ ದೂರು ದಾಖಲಿಸಿದ್ದರು. ಅದರಂತೆ ಗುತ್ತಿಗೆದಾರ 15 ಸಾವಿರ ರೂ. ಲಂಚ ನೀಡಿದ ಲಂಚವನ್ನು ರಾಜು ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಈತನನ್ನು ಬಂಧಿಸಿದ್ದಾರೆ.