ಬೆಂಗಳೂರು: ಗೂಗಲ್ ಪೇ ಮೂಲಕ ಲಂಚ ಪಡೆದ ಆರೋಪ; ಎಎಸ್ಸೈ ಎಸಿಬಿ ಬಲೆಗೆ
ಬೆಂಗಳೂರು, ಜ.4:ವ್ಯಕ್ತಿಯೊಬ್ಬರಿಗೆ ಕ್ರಿಮಿನಲ್ ಪ್ರಕರಣ ದಾಖಲು ಮಾಡುವುದಾಗಿ ಬೆದರಿಸಿ ಗೂಗಲ್ ಪೇ ಮೂಲಕ ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪದಡಿ ಪೊಲೀಸ್ ಎಎಸ್ಸೈಯೊಬ್ಬತ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿದ್ದಾರೆ.
ಇಲ್ಲಿನ ವೈಟ್ಫೀಲ್ಡ್ ಪೊಲೀಸ್ ಠಾಣೆಯ ಎಎಸ್ಸೈ ದೇವರಾಜ್ ಎಂಬಾತನ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿದೆ.
ನಗರದ ಚಿಮ್ಮಸಂದ್ರ ಬಿದರಹಳ್ಳಿ ಹೋಬಳಿ ನಿವಾಸಿಯೊಬ್ಬರು ಸ್ಟೀಲ್ ವ್ಯಾಪಾರ ಮಾಡುತ್ತಿದ್ದು, ಸ್ಟೀಲ್ ಕಂಬಿಗಳನ್ನು ಟಾಟಾ ಏಸ್ ಗಾಡಿಯಲ್ಲಿ ಸರಬರಾಜು ಮಾಡುತ್ತಿದ್ದರು.ಈ ಹಿಂದೆ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಎಎಸ್ಸೈ ಆಗಿದ್ದ ದೇವರಾಜ್, ಇವರನ್ನು ಬೆದರಿಸಿ, ಸ್ಟೀಲ್ ಕಳ್ಳತನ ಪ್ರಕರಣದಲ್ಲಿ ಬಂಧಿಸುವುದಾಗಿ ಹೇಳಿದ್ದ. ಅಷ್ಟೇ ಅಲ್ಲದೆ, ಹಲವು ಬಾರಿ ಗೂಗಲ್ ಪೇ ಮೂಲಕ 1.95 ಲಕ್ಷ ರೂ. ವಸೂಲಿ ಮಾಡಿದ್ದ. ಈ ಸಂಬಂಧ ಎಸಿಬಿಗೆ ದೂರು ದಾಖಲಾಗಿತ್ತು.
ಮಂಗಳವಾರ ಎಸಿಬಿ ತನಿಖಾಧಿಕಾರಿಗಳು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಎಎಸ್ಸೈ ದೇವರಾಜ್ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಬೆಂಗಳೂರು ನಗರ ಎಸಿಬಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.