ರಾಜಧಾನಿಯಲ್ಲಿ ರಣಕಹಳೆ ಮೊಳಗಿಸಿದ ದಲಿತರು, ಪ್ರಗತಿಪರರು: ನ್ಯಾ.ಮಲ್ಲಿಕಾರ್ಜುನ ಗೌಡ ಪಾಟೀಲ ವಜಾಕ್ಕೆ ಪಟ್ಟು
ಅಂಬೇಡ್ಕರ್ ಗೆ ಅಪಮಾನ ಘಟನೆ ನಮ್ಮ ಕಣ್ಣು ತೆರೆಸಿದೆ ಎಂದ ಸಿಎಂ ಬೊಮ್ಮಾಯಿ
ಬೆಂಗಳೂರು, ಫೆ.19: ಗಣರಾಜ್ಯೋತ್ಸವ ಆಚರಣೆ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವು ಮಾಡಿಸಿದ ಆರೋಪಕ್ಕೆ ಗುರಿಯಾಗಿರುವ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡಪಾಟೀಲ ಅವರನ್ನು ವಜಾಗೊಳಿಸಬೇಕೆಂದು ದಲಿತರ ಸಂಘಟನೆಯ ಮುಖಂಡರು, ಪ್ರಗತಿಪರರು, ಚಿಂತಕರು ಒಕ್ಕೊರಲಿನಿಂದ ಆಗ್ರಹಿಸಿ, ಸರಕಾರದ ವಿರುದ್ಧ ರಣಕಹಳೆ ಮೊಳಗಿಸಿದರು.
ಶನಿವಾರ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ-ಕರ್ನಾಟಕ ನೇತೃತ್ವದಲ್ಲಿ ಇಲ್ಲಿನ ಸಿಟಿ ರೈಲ್ವೇ ನಿಲ್ದಾಣ ಮುಂಭಾಗ ಜಮಾಯಿಸಿದ ಸಾವಿರಾರು ಹೋರಾಟಗಾರರು, ವಿಧಾನ ಸೌಧ, ಹೈಕೋರ್ಟ್ ಚಲೋ ಘೋಷಣೆಯೊಂದಿಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು.
ಬಳಿಕ ಫ್ರೀಡಂಪಾರ್ಕ್ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಜಮಾವಣೆಗೊಂಡ ಹೋರಾಟಗಾರರು, ಸಂವಿಧಾನ ವಿರೋಧಿ ಮಲ್ಲಿಕಾರ್ಜುನ ಗೌಡ ಪಾಟೀಲ್ ಅವರ ವಿರುದ್ಧ ಈ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಎಲ್ಲ ಕೋರ್ಟ್ ಸಭಾಂಗಣಗಳಲ್ಲಿಯೇ ಅಂಬೇಡ್ಕರ್ ಅವರ ಭಾವಚಿತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು. ನ್ಯಾಯಾಲಯಗಳಲ್ಲಿ ಮೀಸಲಾತಿ ಕಡ್ಡಾಯಗೊಳಿಸಬೇಕು. ಅದೇ ರೀತಿ, ಹುಮ್ನಾಬಾದ್ ತಹಶೀಲ್ದಾರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ನಿರ್ಣಯಗಳನ್ನು ಒಕ್ಕೊರಲಿನಿಂದ ಅಂಗೀಕರಿಸಿದರು.
ಪ್ರತಿಭಟನಾ ಮೆರವಣಿಯನ್ನುದ್ದೇಶಿಸಿ ಮಾತನಾಡಿದ ಮೈಸೂರು ಉರಿಲಿಂಗಿ ಮಠ ಜ್ಞಾನ ಪ್ರಕಾಶ್ ಸ್ವಾಮೀಜಿ, ಸಂವಿಧಾನ, ಅಂಬೇಡ್ಕರ್ ಅವರನ್ನು ಅವಮಾನಿಸುವ ಹಿಂದೆ ಬಹುದೊಡ್ಡ ಷಡ್ಯಂತ್ರವೇ ಇದೆ. ಹಾಗಾಗಿ, ಸಂವಿಧಾನ ವಿರೋಧಿ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಪಾಠ ಕಲಿಸಬೇಕು ಎಂದು ಹೇಳಿದರು.
ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಇಂದು ಹಲವರು ಅಂಬೇಡ್ಕರ್ ಅವರ ಹೆಸರಿನಲ್ಲಿ ಗೆದ್ದು, ಮನುವಾದಿಗಳ ಗುಲಾಮರಾಗಿ ಸೇವೆ ಸಲ್ಲಿಸುತ್ತಿರುವುದು ಖಂಡನೀಯ. ಈ ಹಿಂದೆಯೂ ಅಂಬೇಡ್ಕರ್ ಅವರನ್ನು ಅಪಮಾನ ಮಾಡಿರುವ ಘಟನೆಗಳ ನಡೆದಿವೆ. ಇದೀಗ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಸಂಸ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಮಲ್ಲಿಕಾರ್ಜುನ ಗೌಡ ಅವರನ್ನು ನ್ಯಾಯಮೂರ್ತಿ ಎನ್ನುತ್ತಾರೆ. ಆದರೆ ಅವರ ಒಳಗಡೆ ಇರುವುದು ಜಾತಿವಾದಿ ಮನಸ್ಸು. ಬಸವಣ್ಣ ಹಾಗೂ ಕುವೆಂಪು ಅವರ ನಾಡಿನಲ್ಲಿ ಇಂತಹ ಜಾತಿವಾದಿ ಮನಸ್ಸುಗಳು ನ್ಯಾಯಸ್ಥಾನದಲ್ಲಿ ಕುಳಿತಿರುವುದು ಅತ್ಯಂತ ಅಪಮಾನಕರ ಸಂಗತಿ ಎಂದು ಟೀಕಿಸಿದರು.
ನ್ಯಾಯಾಧೀಶರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ವರ್ಗಾವಣೆ ಶಿಕ್ಷೆಯಲ್ಲ. ಶಿಕ್ಷೆಯಾಗಬೇಕು ಎಂಬುದು ಬಹುದೊಡ್ಡ ಬೇಡಿಕೆ. ಸರಕಾರ ಅನೇಕ ಸುತ್ತೋಲೆಗಳನ್ನು ಹೊರಡಿಸಿದ್ದರೂ ನ್ಯಾಯಾಧೀಶರು ಅಂಬೇಡ್ಕರ್ ಭಾವಚಿತ್ರ ತೆಗೆಸಿದ್ದಾರೆ ಎಂದ ಅವರು, ನ್ಯಾಯಾಂಗದಲ್ಲಿ ತಳಸಮುದಾಯಗಳಿಗೆ ಪಾಲುದಾರಿಕೆ ಬೇಕಾಗಿದೆ ಎಂದು ಹೇಳಿದರು.
ಚಿಂತಕ, ನಟ ಚೇತನ್ ಮಾತನಾಡಿ, ನಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ಸೂ ಅಲ್ಲ. ನಾವು ಪರ್ಯಾಯ ಶಕ್ತಿಗಳು. ಸದ್ಯ ಈಗ ದೊಡ್ಡ ವಿವಾದ ನಡೆಯುತ್ತಿದೆ. ಆದರೆ, ನಾವು ನೀಲಿ ಶಾಲುಗಳು. ಬದಲಾವಣೆಯೇ ಪರ್ಯಾಯವಾಗಿದೆ. ಈ ಘೋಷಣೆ ರಾಜ್ಯದ ಮೂಲೆಮೂಲೆಗೂ ಹರಡುತ್ತಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಚಿಂತಕರಾದ ಯೋಗೀಶ್ ಮಾಸ್ಟರ್, ಹ.ರಾ.ಮಹೇಶ್, ಹೋರಾಟಗಾರರಾದ ಬಿ.ಗೋಪಾಲ್, ಎಂ.ವೆಂಕಟಸ್ವಾಮಿ, ಜಿಗಣಿ ಶಂಕರ್, ಅಣ್ಣಯ್ಯ, ಶ್ರೀಧರ್ ಕಲಿವೀರ, ವಿ.ನಾಗರಾಜ್, ಚನ್ನಕೃಷ್ಣಪ್ಪ, ಮರಿಯಪ್ಪ, ಹರಿರಾಂ, ಹೆಣ್ಣೂರು ಶ್ರೀನಿವಾಸ್, ಮಹಾದೇವ ಸ್ವಾಮಿ, ಎನ್.ಮೂರ್ತಿ, ಹೆಬ್ಬಾಳ ವೆಂಕಟೇಶ್, ಡಿ.ಶಿವಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಪಾವಗಡ ಶ್ರೀರಾಮ್, ಭೀಮಪುತ್ರಿ ರೇವತಿ ರಾಜ್, ಬಿ.ಆರ್.ಭಾಸ್ಕರ್ ಪ್ರಸಾದ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಅಂಬೇಡ್ಕರ್ ಗೆ ಅಪಮಾನ, ನಮ್ಮ ಕಣ್ಣು ತೆರೆಸಿದೆ: ಸಿಎಂ ಬೊಮ್ಮಾಯಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವು ಮಾಡಿಸಿ ಅಪಮಾನಗೈದ ಘಟನೆಯೂ ನಮ್ಮ ಕಣ್ಣು ತೆರೆಸಿದ್ದು, ಈ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಇಲ್ಲಿನ ಫ್ರೀಡಂ ಪಾರ್ಕ್ನಲ್ಲಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ-ಕರ್ನಾಟಕ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಭಾವಚಿತ್ರ ಘಟನೆಯನ್ನು ದಲಿತ ಸಮುದಾಯದ ಮುಖಂಡರು ನನಗೆ ಸ್ವವಿವರವಾಗಿ ಹೇಳಿದ್ದಾರೆ. ಈ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಿ, ಶೀಘ್ರದಲ್ಲಿಯೇ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಘಟನೆ ಖಂಡನೀಯ. ಯಾವ ಕಾರಣದಿಂದಲೂ ಸಂವಿಧಾನ ಶಿಲ್ಪಿಗೆ ಅವಮಾನ ಆಗುವ ರೀತಿ ನಡೆದುಕೊಳ್ಳಬಾರದು ಎಂದ ಅವರು, ಅಂಬೇಡ್ಕರ್ ಅವರ ಘನತೆ, ಗೌರವ ಎತ್ತಿ ಹಿಡಿಯುವಲ್ಲಿ ನಾವು ಅತ್ಯಂತ ಮುಂದೆ ಇದ್ದು, ಸಂವಿಧಾನ ಬದ್ಧವಾಗಿ ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ ಎಂದರು.
ಸಂಚಾರ ದಟ್ಟಣೆ
ಇಲ್ಲಿನ ಸಿಟಿ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿನ್ನೆಲೆ ಕೆಆರ್ ವೃತ್ತ, ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ದಟ್ಟಣೆ ಶನಿವಾರ ಅಧಿಕಗೊಂಡಿತ್ತು. ಸಾಲು ಸಾಲಾಗಿ ವಾಹನಗಳು ರಸ್ತೆಯ ಮೇಲಿಯೇ ಗಂಟೆ ಗಟ್ಟಲೆ ನಿಂತಿದ್ದ ದೃಶ್ಯ ಕಂಡುಬಂದಿತು.
ಬಿಗಿ ಪೊಲೀಸ್ ಭದ್ರತೆ
ಬೃಹತ್ ಪ್ರತಿಭಟನಾ ಮೆರವಣಿಗೆ ಹಿನ್ನೆಲೆ 11 ಎಸಿಪಿಗಳು, 30 ಇನ್ಸ್ಪೆಕ್ಟರ್, 1030 ಮಹಿಳಾ ಮತ್ತು ಪುರುಷ ಸಿಬ್ಬಂದಿ, 10 ಕೆಎಸ್ಸಾಆರ್ಪಿ ತುಕಡಿ, 2 ವಾಟರ್ ಜೆಟ್, 2 ಫೈರ್ ಎಂಜಿನ್ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.