ಬೆಂಗಳೂರು | ಆನ್ಲೈನ್ ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ: ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.24ಳ ಸಾರ್ವಜನಿಕರನ್ನು ಸಂಪರ್ಕಿಸಿ ಆನ್ಲೈನ್ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸತೀಶ್(24), ಉದಯ್(24), ಜಯರಾಮ್(33) ಮತ್ತು ವಿನಯ್(26) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.2ರಂದು ಅಪರಿಚಿತ ವ್ಯಕ್ತಿಯೊಬ್ಬ ಫಿರ್ಯಾದುದಾರರಿಗೆ ದೂರವಾಣಿ ಕರೆ ಮಾಡಿ ತಾನು ಕಾರ್ತಿಕ್ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ಟಾಟಾ ಕ್ಯಾಪಿಟಲ್ ಫೈನಾನ್ಸ್ನಲ್ಲಿಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ತಮಗೆ ವ್ಯಾಪಾರಕ್ಕಾಗಿ ಸಾಲ ಕೊಡಿಸುವುದಾಗಿ ತಿಳಿಸಿದ್ದಾನೆ.
ಮೊದಲಿಗೆ ಅಪ್ಲಿಕೇಷನ್ ಶುಲ್ಕ ಎಂದು ಒಂದು ಸಾವಿರ ರೂ. ಹಣವನ್ನು ಪಡೆದಿದ್ದಾನೆ. ತದನಂತರ ಮತ್ತೊಬ್ಬ ವ್ಯಕ್ತಿ, ದೂರುದಾರರ ಮೊಬೈಲ್ ಗೆ ಕರೆ ಮಾಡಿ ಸಾಲ ದಾಖಲಾತಿಗಳ ಪರಿಶೀಲನೆಗಾಗಿ 23 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದಾನೆ. ತದನಂತರ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ನಿಮಗೆ 18 ಲಕ್ಷ ರೂ. ಸಾಲ ಮಂಜೂರಾಗಿದೆ ಎಂದು ತಿಳಿಸಿದ್ದಾನೆ.
ಆದರೆ, ಸಾಲ ಪಡೆಯಲು ತೆರಿಗೆ ಕಟ್ಟಬೇಕೆಂದು ನಂಬಿಸಿ 32 ಸಾವಿರ ರೂ.ಗಳನ್ನು ಪಡೆದಿದ್ದಾನೆ. ಹೀಗೆ ಹಂತ ಹಂತವಾಗಿ 1.33 ಲಕ್ಷ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಹಾಕಿಸಿಕೊಂಡು ಆರೋಪಿಗಳು ಮೋಸ ಮಾಡಿರುವ ವಿಚಾರ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳಿಂದ 4 ಮೊಬೈಲ್, 7 ಸಿಎಂ ಕಾರ್ಡ್ ಮತ್ತು ಅವರ ಬ್ಯಾಂಕ್ ಖಾತೆಗಳಲ್ಲಿದ್ದ 1.50 ಲಕ್ಷ ಹಣವನ್ನು ಜಪ್ತಿ ಮಾಡಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.