ಉಡುಪಿಯಲ್ಲಿ ಮೇ 14ಕ್ಕೆ ಸಾಮರಸ್ಯ ಸಮಾವೇಶ
ಬೆಂಗಳೂರು, ಮೇ 10: ರಾಜ್ಯದಲ್ಲಿ ಧರ್ಮ ವೈಷಮ್ಯವನ್ನು ಮುನ್ನೆಲೆಗೆ ತಂದು ಈ ದೇಶವನ್ನು ಅವನತಿಯತ್ತ ಕೊಂಡೊಯ್ಯಲಾಗುತ್ತಿದೆ. ಅದನ್ನು ವಿಫಲಗೊಳಿಸಲು ಉಡುಪಿಯಲ್ಲಿ ಮೇ 14ಕ್ಕೆ ಸಾಮರಸ್ಯ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಬಹುತ್ವ ಕರ್ನಾಟಕವು ತಿಳಿಸಿದೆ.
ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಶಾಂತಿಯ ತೋಟದಲ್ಲಿ ಬೆಂಕಿ ಹಾಕುವ ಕೆಲಸವನ್ನು ಕೆಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ಮಾಡುತ್ತಿದ್ದಾರೆ. ಸರಕಾರ ಇದನ್ನು ನಿಯಂತ್ರಿಸಬೇಕು. ಸಮಾಜದಲ್ಲಿ ಉಂಟಾದ ಅಶಾಂತಿಯನ್ನು ತೊಲಗಿಸಲು ಸಾಮರಸ್ಯ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.
ದಲಿತ ಮುಖಂಡ ಮೋಹನ್ ರಾಜ್ ಮಾತನಾಡಿ, ಸರಕಾರವೇ ಕೋಮುಗಲಭೆಯ ಪರವಾಗಿ ನಿಂತಿದೆ. ರಾಜಕೀಯ ಮತ್ತ ಧರ್ಮ ಒಗ್ಗೂಡಿದ್ದರಿಂದ ಇಂದು ಎರಡೂ ಭ್ರಷ್ಟಗೊಂಡಿವೆ ಎಂದು ತಿಳಿಸಿದರು.
ಬರಹಗಾರ್ತಿ ಕೆ. ಷರೀಫಾ ಅವರು ಮಾತನಾಡಿ, ರಾಜ್ಯದಲ್ಲಿ ಶೇ.5ರಷ್ಟು ಕಿಡಿಗೇಡಿಗಳು ಕೋಮು ವಿಷಬೀಜವನ್ನು ಬಿತ್ತುತ್ತಿದ್ದಾರೆ. ಶೇ.95 ರಷ್ಟು ಜನರು ಅವರನ್ನು ಧಿಕ್ಕರಿಸಿ ಬದುಕುತ್ತಿದ್ದಾರೆ. ಬೀದಿ ಬದಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಹಿಂದು ಕಾರ್ಯಕರ್ತರು ಧ್ವಂಸ ಮಾಡಿದ ಮರುದಿನವೇ ಹಿಂದು-ಮುಸ್ಲಿಮರು ಒಗ್ಗೂಡಿ, ಸಂತ್ರಸ್ತನಿಗೆ ನೆರವಾಗಿದ್ದಾರೆ ಎಂದು ನೆನಪಿಸಿಕೊಂಡರು.