ನಟಿ ಚೇತನಾ ಸಾವು ಪ್ರಕರಣ: ಕಾಸ್ಮೆಟಿಕ್ ಸರ್ಜರಿ ಮಾಡಿದ್ದ ಆಸ್ಪತ್ರೆಗೆ ಬೀಗ ಜಡಿದ ಆರೋಗ್ಯ ಇಲಾಖೆ
ಬೆಂಗಳೂರು, ಮೇ 18: ಕಿರುತರೆ ನಟಿ ಚೇತನಾರಾಜ್(21) ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರಿಗೆ ಕಾಸ್ಮೆಟಿಕ್ ಸರ್ಜರಿ ಮಾಡಿದ್ದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಬೆಂಗಳೂರು ನಗರ ಆರೋಗ್ಯ ಇಲಾಖೆ ಬೀಗ ಜಡಿದಿದೆ.
ಚೇತನಾ ದೇಹದ ಕೊಬ್ಬಿನಾಂಶ (ಫ್ಯಾಟ್) ಕರಗಿಸಲು ನವರಂಗ್ ಸರ್ಕಲ್ನಲ್ಲಿರುವ ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಗೆ ದಾಖಲಾಗಿ ಮೇ 16ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಅಂದೇ ಸಂಜೆ ಅವರು ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿನ ನಿರ್ಲಕ್ಷ್ಯದಿಂದ ಚೇತನಾರಾಜ್ ಸಾವನ್ನಪ್ಪಿರುವುದಾಗಿ ಅವರ ಕುಟುಂಬಸ್ಥರು ಆರೋಪಿಸಿ ಪೊಲೀಸ್ ದೂರು ನೀಡಿದ್ದರು.
ಚೇತನಾ ಸಾವಿಗೆ ಸಂಬಂಧಿಸಿ ವಿವರಣೆ ಕೋರಿ ಬೆಂಗಳೂರು ನಗರ ಆರೋಗ್ಯ ಇಲಾಖೆಯು ಮೇ 18ರಂದು ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಗೆ ನೋಟಿಸ್ ಕಳುಹಿಸಿತ್ತು. ನೋಟಿಸ್ ಗೆ 24 ಗಂಟೆಯೊಳಗೆ ಉತ್ತರಿಸುವಂತೆ, ಇಲ್ಲವಾದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು. ಇದೀಗ ಅದರ ಬೆನ್ನಲ್ಲೆ ಬೆಂಗಳೂರು ಜಿಲ್ಲೆ ಡಿಎಚ್ ಒ ನೇತೃತ್ವದ ಅಧಿಕಾರಿಗಳು ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಬೀಗ ಜಡಿದಿದ್ದಾರೆ.