ಬೆಂಗಳೂರು: ಶಾಲಾ ಬಸ್ ಹರಿದು ಬಾಲಕಿ ಮೃತ್ಯು
ಬೆಂಗಳೂರು, ಮೇ 26: ದ್ವಿಚಕ್ರ ವಾಹನಕ್ಕೆ ಶಾಲಾ ಬಸ್ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಇಲ್ಲಿನ ಬನಶಂಕರಿ ಸಂಚಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಯಂಡಹಳ್ಳಿ ನಿವಾಸಿ ಕೀರ್ತನಾ(16) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈಕೆಯ ಅಕ್ಕ ಹರ್ಷಿತಾಳೊಂದಿಗೆ ಕನಕಪುರ ಬಳಿಯ ಹಾರೋಹಳ್ಳಿಗೆ ಹೋಗಿದ್ದು, ಅಲ್ಲಿಂದ ಗುರುವಾರ ಬೆಳಗ್ಗೆ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬಂದಿದ್ದಾರೆ.
ನಾಯಂಡಹಳ್ಳಿಯಲ್ಲಿರುವ ತಮ್ಮ ಮನೆಗೆ ಹೋಗಲು ತಡವಾಗುತ್ತದೆ ಎಂದು ಸ್ನೇಹಿತ ದರ್ಶನ್ನನ್ನು ಅಲ್ಲಿಗೆ ಬರುವಂತೆ ತಿಳಿಸಿದ್ದಾರೆ. ಅಲ್ಲಿಗೆ ದ್ವಿಚಕ್ರ ವಾಹನದಲ್ಲಿ ಬಂದ ದರ್ಶನ್(21) ಜತೆ ಕೀರ್ತನಾ ಮತ್ತು ಹರ್ಷಿತಾ ಹೊರಟರು ಎನ್ನಲಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ಜಂಕ್ಷನ್ನಿಂದ ಕಾಮಾಕ್ಯ ಕಡೆ ಹೋಗುವಾಗ ಮೇಲ್ಸತುವೆ ಮೇಲಿಂದ ಬೆಳಗ್ಗೆ 9 ಗಂಟೆ ಸಮಯದಲ್ಲಿ ಬರುತ್ತಿದ್ದ ಶಾಲಾ ಬಸ್ವೊಂದು ಹೋಟೆಲ್ ಒಂದರ ಮುಂಭಾಗ ಢಿಕ್ಕಿ ಹೊಡೆದಿದ್ದು, ಇದರ ರಭಸಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ದರ್ಶನ್, ಕೀರ್ತನಾ ಮತ್ತು ಹರ್ಷಿತಾ ಕೆಳಗೆ ಬಿದ್ದಿದ್ದಾರೆ.
ಆ ವೇಳೆ ಹಿಂದಿನಿಂದ ಬಂದ ಬಸ್ ಕೀರ್ತನಾ ತಲೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಸಂಬಂಧ ಬನಶಂಕರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.